ಜೇವರ್ಗಿ: ‘ಯಡ್ರಾಮಿ ತಾಲ್ಲೂಕಿನ ವರವಿ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ನೀಡಲಾಗುವುದು’ ಎಂದು ಶಾಸಕ ಡಾ.ಅಜಯಸಿಂಗ್ ಹೇಳಿದರು.
ಯಡ್ರಾಮಿ ತಾಲ್ಲೂಕಿನ ವರವಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿರಾಜ್ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ವರವಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಕರಕಿಹಳ್ಳಿಯಿಂದ ವರವಿ ಗ್ರಾಮದವರೆಗಿನ 3 ಕಿ.ಮೀ ರಸ್ತೆ ಡಾಂಬರೀಕರಣಕ್ಕೆ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿಯಲ್ಲಿ ₹1.83 ಕೋಟಿ ಬಿಡುಗಡೆಯಾಗಿದೆ. ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಅವರು ಹೇಳಿದರು.
ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರುಕುಂಪಟೇಲ ಇಜೇರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚಂದಮ್ಮ ಸಂಗಣ್ಣ ಇಟಗಾ, ಉಪಾಧ್ಯಕ್ಷ ಗೊಲ್ಲಾಳಪ್ಪ ಕರಕಿಹಳ್ಳಿ, ಚಂದ್ರಶೇಖರ ಹರನಾಳ, ಶಿವಪುತ್ರಪ್ಪ ಸಾಹು ಕೋರಿ, ಮಲ್ಲಣ್ಣಗೌಡ ನೇದಲಗಿ,
ಶಿವರಾಯಗೌಡ ಪೊಲೀಸ್ ಪಾಟೀಲ, ಸುರಜ್ ತಿವಾರಿ, ಹಣಮಂತರಾಯಗೌಡ ವರವಿ, ಕಲ್ಯಾಣರಾಯಗೌಡ ವರವಿ, ಗುರಣ್ಣಗೌಡ ಪಾಟೀಲ, ಅಶೋಕ ಕರಿಭಾವಿ, ಬಸಣ್ಣಗೌಡ ಮಾಲಿಪಾಟೀಲ, ಸಂಜು ತಿವಾರಿ, ಹಳ್ಳೆಪ್ಪ ತಳವಾರ, ರಾಣೋಜಿ ಸಾಹು, ಬೀರಪ್ಪ ಪೂಜಾರಿ ಸೇರಿದಂತೆ ಪಂಚಾಯಿತಿರಾಜ್ ಇಲಾಖೆ ಅಧಿಕಾರಿಗಳು ಹಾಗೂ ವರವಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.