ಕಲಬುರಗಿ: ಕೇಂದ್ರ ಸರ್ಕಾರದ ಭಾರತ ಮಾಲಾ ಯೋಜನೆಯಡಿ ಅಫಜಲಪುರದ ಕುಲಾಲಿ ರೈಲ್ವೆ ನಿಲ್ದಾಣದ ಹತ್ತಿರ ರೈಲ್ವೆ ಮೇಲ್ಸೇತುವೆ (ಆರ್ಒಬಿ) ನಿರ್ಮಿಸಬೇಕು ಎಂದು ಅಫಜಲಪುರ ಶಾಸಕ ಎಂ.ವೈ. ಪಾಟೀಲ ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತ ಮಾಲಾ ಯೋಜನೆಯು ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು, ಸೂರತ್–ಚೆನ್ನೈ ನಿರ್ಮಾಣದಿಂದ ಉತ್ತರದಿಂದ ದಕ್ಷಿಣದವರೆಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಅಫಜಲಪುರ ಕ್ಷೇತ್ರದಲ್ಲಿ ಈ ರಸ್ತೆಯು 52 ಕಿ.ಮೀ. ಹಾದು ಹೋಗಲಿದ್ದು, ಅಲ್ಲಿ ಬಾರಖೇಡ, ಬೀಳಗಿ ರಾಜ್ಯ ಹೆದ್ದಾರಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ವಾಗಬೇಕು. ಈ ಭಾಗದಲ್ಲಿ ಮೂರು ಸಕ್ಕರೆ ಕಾರ್ಖಾನೆಗಳಿವೆ. ರೈತರ ಕಬ್ಬು ಸಾಗಿಸುವ ವಾಹನಗಳಿಗೆ ಕೆಳಸೇತುವೆ ದಾಟಲು ಆಗುತ್ತಿಲ್ಲ. ಆದ್ದರಿಂದ ಆರ್ಒಬಿ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೇ, ದತ್ತಾತ್ರೇಯ ದೇವಸ್ಥಾನದಲ್ಲಿ ಕುಡಿಯುವ ನೀರಿಗಾಗಿ ಭೀಮಾ ನದಿಗೆ ಈಗಿರುವ ಬ್ಯಾರೇಜುಗಳಿಗೆ ಹೈಡ್ರಾಲಿಕ್ ಗೇಟ್ ಅಳವಡಿಸಿ ನೀರು ಶೇಖರಣೆ ಮಾಡಬೇಕು. ಇವುಗಳನ್ನು ಭಾರತ ಮಾಲಾ ಯೋಜನೆಯಡಿ ಮಂಜೂರಾತಿ ನೀಡಬೇಕು’ ಎಂದುಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.