ADVERTISEMENT

ಆರೋಗ್ಯ ಕ್ಲಿನಿಕ್‌ ಸದ್ಬಳಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 3:54 IST
Last Updated 7 ಜುಲೈ 2022, 3:54 IST
ಕಲಬುರಗಿ ನಗರದ ಕಲ್ಯಾಣ ಕರ್ನಾಟಕ ಪ್ರದೇಶಿಕ ಅಭಿವೃದ್ಧಿ ಮಂಡಳಿ ಆವರಣದಲ್ಲಿ ಶ್ರಮಿಕ ಸಂಜೀವಿನಿ ಸಂಚಾರಿ ಆರೋಗ್ಯ ಕ್ಲಿನಿಕ್ ಸೇವಾ ವಾಹನಕ್ಕೆ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡಿದರು
ಕಲಬುರಗಿ ನಗರದ ಕಲ್ಯಾಣ ಕರ್ನಾಟಕ ಪ್ರದೇಶಿಕ ಅಭಿವೃದ್ಧಿ ಮಂಡಳಿ ಆವರಣದಲ್ಲಿ ಶ್ರಮಿಕ ಸಂಜೀವಿನಿ ಸಂಚಾರಿ ಆರೋಗ್ಯ ಕ್ಲಿನಿಕ್ ಸೇವಾ ವಾಹನಕ್ಕೆ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡಿದರು   

ಕಲಬುರಗಿ: ‘ನೋಂದಾಯಿತ ಕಟ್ಟಡ ಕಾರ್ಮಿಕ ಮತ್ತು ಕುಟುಂಬಸ್ಥರ ಆರೋಗ್ಯ ಸೇವೆಗಾಗಿ ಕಲ್ಪಿಸುತ್ತಿರುವ ಸಂಚಾರಿ ಆರೋಗ್ಯ ಕ್ಲಿನಿಕ್‌ನ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು’ ಎಂದುಕೆಕೆಆರ್‌ಡಿಬಿ ಅಧ್ಯಕ್ಷರೂ ಆಗಿರುವ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

ಇಲ್ಲಿನ ಕಲ್ಯಾಣ ಕರ್ನಾಟಕ ಪ್ರದೇಶಿಕ ಅಭಿವೃದ್ಧಿ ಮಂಡಳಿ ಆವರಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ ವತಿಯಿಂದ ಶ್ರಮಿಕ ಸಂಜೀವಿನಿ ಸಂಚಾರಿ ಆರೋಗ್ಯ ಕ್ಲಿನಿಕ್ ಸೇವಾ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಟ್ಟಡ ಕಾರ್ಮಿಕರ ಜೀವನ ಸುಧಾರಣೆಗಾಗಿ ಕಾರ್ಮಿಕ ಇಲಾಖೆ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಕಟ್ಟಡ ಕಾರ್ಮಿಕರು ಕೆಲಸದಲ್ಲಿರುವ ಹಾಗೂ ಅವರು ವಾಸಿಸುವ ಸ್ಥಳಗಳಿಗೆ ಚಿಕಿತ್ಸಾಲಯದೊಂದಿಗೆ ತೆರಳಿ ಉಚಿತ ಸೇವೆ ನೀಡಲಿದೆ’ ಎಂದರು.

ADVERTISEMENT

‘ಸಂಚಾರಿ ಆರೋಗ್ಯ ಕ್ಲಿನಿಕ್‌ನ ಡಾ. ರವಿ ಸಿರಸಗಿ ಮಾತನಾಡಿ, ಸೋಮವಾರದಿಂದ ಶನಿವಾರದ ವರೆಗೆ ನಗರದ ಕಟ್ಟಡ ಕಾರ್ಮಿಕರು ಹೆಚ್ಚಾಗಿ ವಾಸಿಸುವ ಸ್ಥಳಗಳಲ್ಲಿ ಸಂಚಾರಿ ಕ್ಲಿನಿಕ್ ವಾಹನ ತೆರಳಲಿದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆಯಂತಹ ತಪಾಸಣೆ, ಇಸಿಜಿ ಪರೀಕ್ಷೆ ನಡೆಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಬೇರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುವುದು’ ಎಂದು ತಿಳಿಸಿದರು.

ಮಧ್ಯಾಹ್ನದ ಅವಧಿಯಲ್ಲಿ ಸೋಮವಾರ ರಾಮಜಿನಗರ ಮತ್ತು ತಾರಫೈಲ್, ಮಂಗಳವಾರ ಬ್ರಹ್ಮಪೂರ ಮತ್ತು ಬಸವನಗರ, ಬುಧುವಾರ ಗಂಗಾನಗರ ಮತ್ತು ರಾಜಾಪೂರ, ಗುರುವಾರ ಶರಣಸಿರಸಗಿ, ಜಂಬಗಿ ಮತ್ತು ಅಷ್ಟಗಿ, ಶುಕ್ರವಾರ ಊದನೂರ ಮತ್ತು ಹಿರಾಪೂರ, ಶನಿವಾರ ಆದರ್ಶನಗರ ಮತ್ತು ಸಿಬಿಐ ಕಾಲೊನಿಗಳಲ್ಲಿ ಸಂಚರಿಸಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಶಾಸಕರು ಸ್ಥಳದಲ್ಲಿಯೇ ರಕ್ತದೊತ್ತ ತಪಾಸಣೆ ಮಾಡಿಸಿಕೊಂಡರು. ವಿವಿಧ ಕಟ್ಟಡ ಕಾರ್ಮಿಕರು ಆರೋಗ್ಯ ತಪಾಸಣೆ ಒಳಗಾದರು.

ಪ್ರಾದೇಶಿಕ ಉಪಕಾರ್ಮಿಕ ಆಯುಕ್ತ ಡಿ.ಜಿ ನಾಗೇಶ, ಸಹಾಯಕ ಕಾರ್ಮಿಕ ಆಯುಕ್ತ ಡಾ. ಅವಿನಾಶ ನಾಯ್ಕ, ಕಾರ್ಮಿಕ ಅಧಿಕಾರಿ ರಮೇಶ ಎಸ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.