ADVERTISEMENT

ಕಲಬುರಗಿ: ಬಾವಿಯಲ್ಲಿ ತಾಯಿ - ಮಕ್ಕಳ ಶವ ಪತ್ತೆ, ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 6:39 IST
Last Updated 11 ಆಗಸ್ಟ್ 2022, 6:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆಳಂದ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ಮಹಿಳೆಯೊಬ್ಬಳ ಜೊತೆ ಇಬ್ಬರು ಮಕ್ಕಳ ಶವ ಗುರುವಾರ ಬಾವಿಯಲ್ಲಿ ಪತ್ತೆಯಾಗಿದೆ.

ಅಂಬಿಕಾ ರೇವಪ್ಪ ದುದಗಿ (38) ಶವ ಬುಧವಾರ ಸಂಜೆ ಬಾವಿಯಲ್ಲಿ ಪತ್ತೆಯಾಗಿತ್ತು. ತಾಯಿಯೊಂದಿಗೆ ಮೂರು ಮಕ್ಕಳ ಸುಳಿವು ಲಭಿಸದ ಕಾರಣ ಗುರುವಾರ ಬೆಳಿಗ್ಗೆ ಪೊಲೀಸರು ಪತ್ತೆ ಕಾರ್ಯ ಮುಂದುವರಿಸಿದ ಬೆನ್ನಲ್ಲೆ ಪುತ್ರ ದಯಾನಂದ (8) ಶಿವಲೀಲಾ (6) ಶವ ಬಾವಿಯಲ್ಲಿ ಪತ್ತೆಯಾಗಿದೆ.

ಇನ್ನೊಬ್ಬ ಪುತ್ರಿ ಸೃಷ್ಟಿ (6)ಗಾಗಿ ಪತ್ತೆ ಕಾರ್ಯ ಮುಂದುವರೆದಿದೆ.

ADVERTISEMENT

ಮೃತ ಮಹಿಳೆ ಅಂಬಿಕಾ ಮತ್ತು ಮೂವರು ಮಕ್ಕಳು ಚಿತ್ತಾಪುರದ ರಾವೂರು ಗ್ರಾಮದ ತವರು ಮನೆಯಲ್ಲಿ ವಾಸವಾಗಿದ್ದರು.

ಮಂಗಳವಾರವಷ್ಟೇ ನಸುಕಿನ ಜಾವ ಮಾದನ ಹಿಪ್ಪರಗಿ ಗ್ರಾಮಕ್ಕೆ ಬಂದಿದ್ದರು ಎಂದು ಹೇಳಲಾಗುತ್ತಿದೆ.
ರೇವಪ್ಪ ದುದಗಿ ಈಗಾಗಲೇ ಮಾದನ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ, ಗ್ರಾಮದ ಸಿದ್ದರಾಮ ಗಿದನಿ ಅವರು ಆಸ್ತಿ ಖರೀದಿಸಿ ಪೂರ್ಣ ಹಣ ನೀಡದೆ ಜಮೀನು ನೋಂದಣಿ ಮಾಡಿಕೊಂಡಿರುವ ಕುರಿತು ತಕರಾರು ನಡೆದು, ನನ್ನ ಹೆಂಡತಿ ಮತ್ತು ಮೂವರು ಮಕ್ಕಳನ್ನು ಕೊಲೆ ಮಾಡಿ ಬಾವಿಗೆ ಹಾಕಿದ್ದಾನೆ ಎಂದು ದೂರು ಸಲ್ಲಿಸಿದ್ದಾರೆ. ಈಗಾಗಲೇ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

ಬಾವಿಯಲ್ಲಿ ತಾಯಿ, ಮಕ್ಕಳ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಸ್ಥಳಕ್ಕೆ ಡಿವೈಎಸ್ ಪಿ ರವೀಂದ್ರ ಶಿರೂರು, ಆಳಂದ ಸಿಪಿಐ ಬಾಸು ಚವ್ಹಾಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.