ಕಲಬುರಗಿ: ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಬೇಕು. ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು
ಸರ್ಕಾರ ಖರೀದಿಸಬೇಕು. ಕೃಷಿ ಉತ್ಪನ್ನಗಳು ಮತ್ತು ಅಗತ್ಯವಸ್ತುಗಳ ಸಗಟು ಹಾಗೂ ಚಿಲ್ಲರೆ ವ್ಯಾಪಾರವನ್ನು ಸಂಪೂರ್ಣವಾಗಿ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರೈತ–ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್)ಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ‘ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆ ಏರುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣ ಬಡ ಜನತೆಯ ಜೀವನದ ಮೇಲೆ ಆಳ್ವಿಕರು ಬರೆಯನ್ನು ಎಳೆಯುತ್ತಿದ್ದಾರೆ. ಒಂದೆಡೆ ಬೀಜ, ರಸಗೊಬ್ಬರಗಳ ಬೆಲೆಯನ್ನು ದುಬಾರಿ ಮಾಡಿ ಮತ್ತು ಅದರ ಮೇಲೆ ಇರುವ ಸಬ್ಸಿಡಿಯನ್ನು ಹಿಂದಕ್ಕೆ ತೆಗೆದುಕೊಂಡು ಕೃಷಿಯು ದುಬಾರಿಯಾಗಿದೆ. ಇನ್ನೊಂದೆಡೆ ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗದೆ ರೈತರು ಕಂಗಾಲಾಗುವ ಸ್ಥಿತಿ ಬಂದೊದಗಿದೆ’ ಎಂದು ಟೀಕಿಸಿದರು.
ಸರ್ಕಾರವೇ ಬೆಳೆಗಳನ್ನು ಕೊಂಡುಕೊಂಡು ರೈತರಿಗೆ ಪ್ರತಿ ಎಕರೆಗೆ ತಗಲುವ ವೆಚ್ಚವನ್ನು ಒಳಗೊಂಡು ಒಂದೂವರೆ ಪಟ್ಟು ಬೆಂಬಲ ಬೆಲೆಯನ್ನು ಸೇರಿಸಿ ಬೆಲೆ ನಿಗದಿ ಮಾಡಲು ಎಂಎಸ್ಪಿಯನ್ನು ಕಾನೂನು ಬದ್ಧಗೊಳಿಸುವುದು ಅತ್ಯಾವಶ್ಯಕವಾಗಿದೆ. ಇದರೊಂದಿಗೆ ಕೃಷಿ ಉತ್ಪನ್ನಗಳು ಮತ್ತು ಅಗತ್ಯ ವಸ್ತುಗಳ ಸಗಟು ಹಾಗೂ ಚಿಲ್ಲರೆ ವ್ಯಾಪಾರವನ್ನು ಸಂಪೂರ್ಣವಾಗಿ ಸರ್ಕಾರವೇ ವಹಿಸಿಕೊಳ್ಳಬೇಕು. ಕೇಂದ್ರದ ಬಿಜೆಪಿ ಸರ್ಕಾರವು ಕಳೆದ ವರ್ಷ ಮೂರು ಕರಾಳ ಕಾನೂನುಗಳನ್ನು ಹಿಂಪಡೆಯುವ ಸಂದರ್ಭದಲ್ಲಿ ದೇಶದಾದ್ಯಂತ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧ ಗೊಳಿಸುತ್ತೇವೆ ಎಂದು ಹೇಳಿ ಪ್ರಮಾಣ ಮಾಡಿತ್ತು. ಆದರೆ ಕೊಟ್ಟ ಮಾತನ್ನು ಮುರಿದ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಲೇ ಇಲ್ಲ’ ಎಂದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣಪತರಾವ್ ಕೆ. ಮಾನೆ, ಉಪಾಧ್ಯಕ್ಷರಾದ ರಾಜೇಂದ್ರ ಅತನೂರು, ವಿಶ್ವನಾಥ
ಸಿಂಗೆ, ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್.ಬಿ, ಸದಸ್ಯರಾದ ನೀಲಕಂಠ ಎಂ. ಹುಲಿ, ವಿಠ್ಠಲ ರಾಠೋಡ, ಮಲ್ಲಯ್ಯ ಗುತ್ತೇದಾರ, ಶರಣಯ್ಯ ಗುತ್ತೇದಾರ, ಶಂಭುಲಿಂಗ ಸರಡಗಿ, ಮಲ್ಲಿಕಾರ್ಜುನ ಜಾನೆ, ವಾಹೀದ್ ಹಾಗೂ
ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.