ADVERTISEMENT

‘ಯುವಕರು ದುಶ್ಚಟಕ್ಕೆ ಬಲಿಯಾಗದಿರಿ’

ಗುರುವಂದನಾ ಕಾರ್ಯಕ್ರಮ; ಮುಗುಳನ್ನಗೆಯ ಮಂದಾರ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 16:18 IST
Last Updated 28 ಜನವರಿ 2023, 16:18 IST
ಮುಗಳನಾಗಾವಿ ಕಟ್ಟಿಮನಿ ಸಂಸ್ಥಾನ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು
ಮುಗಳನಾಗಾವಿ ಕಟ್ಟಿಮನಿ ಸಂಸ್ಥಾನ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು   

ಕಲಬುರಗಿ: ‘ಯುವಕರು ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಸಮಾಜಕ್ಕೆ ಒಳ್ಳೆ ಹೆಸರು ತಂದು ಮಾದರಿ ವ್ಯಕ್ತಿಯಾಗಿ ಬೆಳೆಯಬೇಕು’ ಎಂದು ಮುಗಳನಾಗಾವಿ ಕಟ್ಟಿಮನಿ ಹಿರೇಮಠ ಸಂಸ್ಥಾನಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.

ಮುಗಳನಾಗಾವಿ ಕಟ್ಟಿಮನಿ ಸಂಸ್ಥಾನ ಹಿರೇಮಠದಲ್ಲಿ ತಮ್ಮ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಯುವಕರು ಸಮಾಜದಲ್ಲಿ ಒಳ್ಳೆಯ ಪುಣ್ಯದ ಕೆಲಸ ಮಾಡಬೇಕು. ಕುಡಿತ, ಮದ್ಯಪಾನದಿಂದ ಆರೋಗ್ಯ ಕೆಡಿಸಿಕೊಳ್ಳಬಾರದು. ಅಮೂಲ್ಯ ಶರೀರ ಹಾಳು ಮಾಡಿಕೊಳ್ಳಬೇಡಿ, ಕೆಟ್ಟಚಟಗಳು ಗುರುವಿನ ಪಾದಕ್ಕೆ ಸಮರ್ಪಿಸುವ ಮೂಲಕ ಉತ್ತಮ ಜೀವನ ರೂಢಿಸಿಕೊಳ್ಳಿ’ ಎಂದು ಹೇಳಿದರು.

ADVERTISEMENT

ಚಿಣಮಗೇರಿಯ ವೀರ ಮಹಾಂತ ಶಿವಾಚಾರ್ಯರು ಮಾತನಾಡಿ, ‘ಸಂತರ ಮಾರ್ಗದರ್ಶನದಿಂದ ಮಾತ್ರ ಸಮಾಜ ಉದ್ಧಾರವಾಗುತ್ತದೆ. ಸಮಾಜ ದಾರಿ ತಪ್ಪಿ ನಡೆಯುವಾಗ ಅದನ್ನು ಸರಿದಾರಿಗೆ ತರುವ ಸಾಮರ್ಥ್ಯ ಮಠಾಧೀಶರಿಗಿದೆ’ ಎಂದರು.

ತೊನಸನಹಳ್ಳಿಯ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯ, ಭರತನೂರ, ಬೆಳಗುಂಪಿ, ಮದ್ರಿಕಿ, ಆಲಮೇಲ ದೇವನ ತೆಗನೂರ ಮಠಗಳ ಸ್ವಾಮೀಜಿಗಳು, ಸಮಾಜ ಸೇವಕಿ ಜಯಶ್ರೀ ಮತ್ತಿಮಡು, ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಭಾಗೀರಥಿ ಗುನ್ನಾಪೂರ, ತಾ.ಪಂ. ಮಾಜಿ ಸದಸ್ಯ ನಾಮದೇವ ರಾಠೋಡ, ಶರಣು ಮೋದಿ, ಸುರೇಶ ಬಡಿಗೇರ, ಅಜಿತ ಪಾಟೀಲ ಇದ್ದರು.

‘ಮುಗಳನ್ನಗೆಯ ಮಂದಾರ’ ಪ್ರಶಸ್ತಿಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ ಯಡ್ರಾಮಿ, ರೇಷ್ಮಿ ಸಂಸ್ಥೆಯ ಅಧ್ಯಕ್ಷೆ ಭಾರತಿ ರೇಷ್ಮಿ ಅವರಿಗೆ ನೀಡಿ ಗೌರವಿಸಲಾಯಿತು.

ಮಾತೃ ಕಲಾಮಂಡಳಿ ಕಲಾವಿದರಿಂದ ಹಾಗೂ ಪಾರ್ವತಿ ಉರ್ಕಿಮಠ ಅವರಿಂದ ಸಂಗೀತ, ನೃತ್ಯ ಕಾರ್ಯಕ್ರಮಗಳು ನಡೆದವು.

ಕಲಬುರಗಿಯ ಯುನೈಟೆಡ್ ಹಾಗೂ ಸಿದ್ರಾಮೇಶ್ವರ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ಶಿಬಿರದಲ್ಲಿ ಸುಮಾರು 400ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. 45ಕ್ಕೂ ಅಧಿಕ ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಮಾಡಲಾಯಿತು.

ಶಿವಲಿಂಗ ಶಾಸ್ತ್ರಿ ಗರೂರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.