ಕಲಬುರ್ಗಿ: ಶಹಾಬಾದ್ ತಾಲ್ಲೂಕಿನ ಮರತೂರ ರೈಲ್ವೆ ನಿಲ್ದಾಣದ ಸಮೀಪ ಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹದ ಗುರುತು ಪತ್ತೆಯಾಗಿದ್ದು, ಸ್ನೇಹಿತನೇ ತನ್ನ ಸಹಚರದೊಂದಿಗೆ ಸೇರಿಕೊಂಡು ಅಪಹರಿಸಿ ಕೊಲೆ ಮಾಡಿ ಶವ ಎಸೆದು ಹೋಗಿರುವುದಾಗಿ ತನಿಖೆಯಲ್ಲಿ ಬಯಲಾಗಿದೆ.
ಜೇವರ್ಗಿ ತಾಲೂಕಿನ ಬಿಲ್ಲಾೈ ಗ್ರಾಮದ ಚನ್ನಬಸಪ್ಪ ನಾಯ್ಕೋಡಿ (35) ಎಂಬಾತ ಕೊಲೆಯಾದ ವ್ಯಕ್ತಿ. ಕಳೆದ ಶನಿವಾರ ನಾಪತ್ತೆಯಾಗಿದ್ದ ಚನ್ನಬಸಪ್ಪ, ಅಂದು ರಾತ್ರಿಯೇ ರೈಲ್ವೆ ನಿಲ್ದಾಣ ಸಮೀಪದ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದ. ಈ ಕುರಿತು ವಾಡಿ ರೈಲ್ವೆ ನಿಲ್ದಾಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇತ್ತ, ಕುಟುಂಬದವರು ನೆಲೋಗಿ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು.
ಇದೀಗ ಹಣಕಾಸಿನ ವಿಷಯ ಸಂಬಂಧ ಅದೇ ನೇದಲಗಿ ಗ್ರಾಮದ ಪರಿಚಯಸ್ಥರೇ ಅಪಹರಣ ಮಾಡಿ, ಕೊಲೆಗೈದು ರೈಲ್ವೆ ಹಳಿ ಮೇಲೆ ಎಸೆದು ಹೋಗಿದ್ದರು ಎಂದು ಬೆಳಕಿಗೆ ಬಂದಿದೆ. ಸ್ನೇಹಿತನಾದ ಲಕ್ಷ್ಮಣ ಎಂಬಾತನಿಗೆ ಚನ್ನಬಸಪ್ಪ ₹ 2 ಲಕ್ಷ ನಗದು ಹಾಗೂ 10 ಗ್ರಾಂ ಬಂಗಾರ ಕೊಟ್ಟಿದ್ದ. ಇದನ್ನು ಮರಳಿ ಕೇಳಿದ ಕಾರಣಕ್ಕೆ ಲಕ್ಷ್ಮಣ ಹಾಗೂ ಇತರ ಇಬ್ಬರು ಸೇರಿಕೊಂಡು ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿದ್ದ ಆರೋಪಿ ಲಕ್ಷ್ಮಣ ಶುಕ್ರವಾರವಷ್ಟೇ ಗ್ರಾಮಕ್ಕೆ ಬಂದಿದ್ದ. ಮರುದಿನವೇ ಹಣ ನೀಡಿದ ಸ್ನೇಹಿತ ಚನ್ನಬಸಪ್ಪನನ್ನು ಹತ್ಯೆ ಮಾಡಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.