ಕಲಬುರಗಿ: ರಾಜ್ಯದ ಕೆಲವೆಡೆ ಧರ್ಮದ ಆಧಾರದಲ್ಲಿ ಜನರನ್ನು ಪ್ರತ್ಯೇಕಿಸುವ ಪ್ರಯತ್ನಗಳು ನಡೆಯುತ್ತಿರುವ ಮಧ್ಯೆಯೇ ನಗರದಲ್ಲಿ ಭಾನುವಾರ ರಾಮನವಮಿ ಅಂಗವಾಗಿ ಆಯೋಜಿಸಿದ್ದ ಶ್ರೀರಾಮನ ಮೂರ್ತಿಯ ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಮರು ಸ್ವಯಂಪ್ರೇರಿತರಾಗಿ ಮಜ್ಜಿಗೆ, ಪಾನಕ ಹಾಗೂ ನೀರು ವಿತರಿಸಿ ದಾಹ ತಣಿಸಿದರು.
ನಗರದ ಆಳಂದ ಚೆಕ್ಪೋಸ್ಟ್ನಿಂದ ಜಗತ್ ವೃತ್ತದವರೆಗೆ ರಾಮನವಮಿ ಉತ್ಸವ ಸಮಿತಿ ಹಾಗೂ ಶ್ರೀರಾಮಸೇನೆ ಆಯೋಜಿಸಿದ್ದ ಬೃಹತ್ ಮೆರವಣಿಯು ಶೇಖ್ ರೋಜಾದ ಖಾದ್ರಿ ಚೌಕ್ ಮಸೀದಿ ಬಳಿ ಬರುತ್ತಿದ್ದಂತೆಯೇ ಅಲ್ಲಿಯೇ ಟೆಂಟ್ ಹಾಕಿದ್ದ ಮುಸ್ಲಿಂ ಸಮುದಾಯದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ಮಜ್ಜಿಗೆ, ಪಾನಕ ವಿತರಿಸಿದರು. ಕೆಲವರು ಟೆಂಟ್ ಬಳಿಯೇ ಬಂದು ಮಜ್ಜಿಗೆ, ಪಾನಕ ಕುಡಿದರೆ ಇನ್ನು ಕೆಲವರಿಗೆ ಮುಸ್ಲಿಂ ಸ್ವಯಂಸೇವಕರು ಅವರಿದ್ದಲ್ಲಿಗೇ ತೆರಳಿ ನೀರಿನ ಪ್ಯಾಕೆಟ್ ವಿತರಿಸಿದರು.
ಮುಸ್ಲಿಂ ಸಮುದಾಯದವರ ಈ ಸೌಹಾರ್ದ ಭಾವ ಕಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರು ಕೈ ಕುಲುಕಿ ಅವರಿಗೆ ಧನ್ಯವಾದ ಅರ್ಪಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಮುದಾಯದ ಮುಖಂಡ ರಹೀಂ ಸಾಬ್ ಮುಲ್ಲಾ, ‘ಕಳೆದ ನಾಲ್ಕು ವರ್ಷಗಳಿಂದ ನಾವು ನಮ್ಮ ಹಿಂದೂ ಸಹೋದರರಿಗೆ ಮಜ್ಜಿಗೆ, ಪಾನಕ ವಿತರಿಸುತ್ತಿದ್ದೇವೆ. ನಮಗೆ ಧರ್ಮ ಮುಖ್ಯವಲ್ಲ. ಬಾಯಾರಿಕೆಯಿಂದ ಬಂದವರಿಗೆ ದಾಹ ನೀಗಿಸುವುದೇ ಮುಖ್ಯವಾಗುತ್ತದೆ. ಹೀಗಾಗಿ, ಯುವಕರ ತಂಡವನ್ನು ಕಟ್ಟಿಕೊಂಡಿದ್ದೇನೆ. ರಾಮನವಮಿ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಹೊರಟಿರುವವರಿಗೆ ಪಾನಕ ಕೊಡುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.