ಚಿಂಚೋಳಿ: ತಾಲ್ಲೂಕಿನ ನಾಗರಾಳ ಜಲಾಶಯಕ್ಕೆ 1,400 ಕ್ಯುಸೆಕ್ ಒಳ ಹರಿವಿದ್ದು, 2,500 ಕ್ಯುಸೆಕ್ ನೀರು ನದಿಗೆ ಬಿಡಲಾಗುತ್ತಿದೆ. ಸದ್ಯ ಜಲಾಶಯದ ನೀರಿನ ಮಟ್ಟ 489.80 ಮೀಟರ್ ಇದೆ. ಜಲಾಶಯದ ಒಂದು ಗೇಟ್ 1.5 ಅಡಿ ಎತ್ತರ, ಮತ್ತೊಂದು ಗೇಟ್ 1 ಅಡಿ ಎತ್ತರ ತೆರೆಯಲಾಗಿದೆ.
ಮಲ್ಲಿಕಾರ್ಜುನ ದೇವಾಲಯ ಜಲಾವ್ರತ: ತಾಲ್ಲೂಕಿನ ಸುಲೇಪೇಟ ಬಳಿಯ ಕುಪನೂರಿನ ಪ್ರಸಿದ್ಧ ಮಲ್ಲಿಕಾರ್ಜುನ ದೇವಾಲಯ ಜಲಾವ್ರತವಾಗಿದೆ. ಸೋಮವಾರ ಮಧ್ಯಾಹ್ನ ಸುರಿದ ಭಾರಿ ಮಳೆಯಿಂದ ದೇವಾಲಯ ಜಲಾವೃತವಾಗಿದ್ದು, ದೇವಾಲಯದ ಅಕ್ಕಪಕ್ಕದ ನೂರಾರು ಎಕರೆ ಜಮೀನಿನಲ್ಲಿರುವ ಬೆಳೆಯೂ ಜಲಾವ್ರತವಾಗಿದೆ.
ತಾಲ್ಲೂಕಿನ ಕರ್ಚಖೇಡ ಗ್ರಾಮದಲ್ಲಿ ಸಿಡಿಲು ಬಡಿದು ಶಾಮರಾವ ಅವರ 4 ಮೇಕೆಗಳು ಸಾವನ್ನಪ್ಪಿದ್ದು, 2 ಮೇಕೆಗಳು ಗಾಯಗೊಂಡಿವೆ. ಕೊರಡಂಪಳ್ಳಿಯಲ್ಲಿ ವಿದ್ಯುತ್ ತಗುಲಿ ಅಣ್ಣಪ್ಪ ಗಿರಿಮಲ್ಲಪ್ಪ ಎಂಬುವವರ ಎತ್ತು ಸಾವನ್ನಪ್ಪಿದೆ.
ಸುಲೇಪೇಟ, ಹೊಡೇಬೀರನಹಳ್ಳಿ, ಕುಪನೂರ, ಗಾರಂಪಳ್ಳಿ, ಹೂಡದಳ್ಳಿ, ದೇಗಲಮಡಿ, ಚಂದ್ರಂಪಳ್ಳಿ, ಐನೊಳ್ಳಿ ಸೇರಿದಂತೆ ಅನೇಕ ಕಡೆ ಸೋಮವಾರ ಮಳೆಯಾಗಿದೆ.
ಉದ್ಭವ ಲಿಂಗದಿಂದ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿರುವ ಜಾಗೃತ ನೆಲೆವೀಡು ಮಲ್ಲಿಕಾರ್ಜುನ ದೇವಾಲಯಕ್ಕೆ ನೀರು ನುಗ್ಗಿದೆ ಎಂದು ಮಂಡಳಿಯ ಮುಖಂಡರಾದ ನರಸಪ್ಪ ಮಾಸ್ತರ್ ಕುಪನೂರು ತಿಳಿಸಿದ್ದಾರೆ.
7 ಕೆರೆಗಳು ಭರ್ತಿ: ನಿರಂತರ ಮಳೆಯಿಂದ ಸಣ್ಣ ನೀರಾವರಿ ಉಪ ವಿಭಾಗ ವ್ಯಾಪ್ತಿಯಲ್ಲಿರುವ 7 ಕೆರೆಗಳು ಭರ್ತಿಯಾಗಿವೆ. ಚಿಕ್ಕಲಿಂಗದಳ್ಳಿ, ಕೋಡ್ಲಿ ಅಲ್ಲಾಪುರ, ಹೂಡದಳ್ಳಿ, ದೋಟಿಕೊಳ, ಯಲಕಪಳ್ಳಿ, ಚಿಂದಾನೂರ, ಐನಾಪುರ (ಹಳೆ) ಕೆರೆಗಳು ತುಂಬಿ ಹೆಚ್ಚುವರಿ ನೀರು ಹೊರ ಹೋಗುತ್ತಿವೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಾಜಿ ಜಾಧವ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.