ಕಲಬುರಗಿ ಹೈಕೋರ್ಟ್ ಪೀಠದ ಅವರಣದಲ್ಲಿ ಶನಿವಾರ ನಡೆದ ವಿಶೇಷ ಲೋಕ ಅದಾಲತ್ ನಡೆಯಿತು.ಪ್ರಜಾವಾಣಿ ಚಿತ್ರ
ಕಲಬುರಗಿ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ನಗರದಲ್ಲಿರುವ ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 296 ಪ್ರಕರಣಗಳು ಇತ್ಯರ್ಥಗೊಂಡಿವೆ. ಒಟ್ಟಾರೆ ₹6.64 ಕೋಟಿ ಪರಿಹಾರ ಮೊತ್ತ ಮಂಜೂರಿಗೆ ಸೂಚಿಸಲಾಗಿದೆ.
ಲೋಕ ಅದಾಲತ್ನಲ್ಲಿ ಮೋಟಾರು ವಾಹನ ವಿಮೆ, ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
ಕಲಬುರಗಿಯಲ್ಲಿ ಮೂರು ಪೀಠಗಳಲ್ಲಿ ಲೋಕ ಅದಾಲತ್ ನಡೆಸಲಾಯಿತು. ನ್ಯಾಯಮೂರ್ತಿ ರವಿ.ವಿ.ಹೊಸಮನಿ, ನ್ಯಾಯಮೂರ್ತಿ ವಿ.ಶ್ರೀಶಾನಂದ ಹಾಗೂ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರು ನೂರಾರು ಅರ್ಜಿಗಳ ವಿಚಾರಣೆ ನಡೆಸಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ವಿಲೇವಾರಿ
ಮಾಡಿದರು.
ಸಂಧಾನಕಾರರಾಗಿ ಸುಧೀರಸಿಂಗ್ ಆರ್.ವಿಜಾಪುರ, ಶರಣಗೌಡ ವಿ.ಪಾಟೀಲ, ವಿಜಯಾ ಎ.ಪಾಟೀಲ ಅವರು ಕಾರ್ಯನಿರ್ವಹಿಸಿದರು. ಕರ್ನಾಟಕ ಹೈಕೋರ್ಟ್ನ ಕಲಬುರಗಿ ಪೀಠದ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಬಸವರಾಜ ಚೆಂಗಟಿ ಉಪಸ್ಥಿತರಿದ್ದರು.
ಸರ್ಕಾರಿ ವಕೀಲರು, ಪ್ರಕರಣಗಳ ಕಕ್ಷಿದಾರರು, ಅವರ ಪರ ವಕೀಲರು ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ ಪಾಲ್ಗೊಂಡಿದ್ದರು.
‘ಪ್ರೀತಿ ವಿಶ್ವಾಸದಿಂದ ಜೀವನ ನಡೆಸಿರಿ’
ಚಿಂಚೋಳಿ: ‘ಸಾರ್ವಜನಿಕರು ನ್ಯಾಯಾಲಯಗಳಿಗೆ ಅಲೆಯುವುದನ್ನು ಬಿಟ್ಟು ರಾಜಿ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಯವ ಮೂಲಕ ಪ್ರೀತಿ ವಿಶ್ವಾಸದಿಂದ ಜೀವನ ನಡೆಸಬೇಕು’ ಎಂದು ನ್ಯಾಯಾಧೀಶ ದತ್ತಕುಮಾರ ಜವಳಕರ ತಿಳಿಸಿದರು.
ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ನಡೆಸಿದ ‘ರಾಷ್ಟ್ರೀಯ ಲೋಕ ಅದಾಲತ್’ನಲ್ಲಿ ಮಾತನಾಡಿದರು.
‘ಸಾರ್ವಜನಿಕರು, ಅಗತ್ಯ ನಾಗರಿಕ ಕಾನೂನುಗಳನ್ನು ತಿಳಿದುಕೊಳ್ಳಬೇಕು. ಮಕ್ಕಳ ಜನನ ಪ್ರಮಾಣ ಪತ್ರ ಅವಶ್ಯವಾಗಿದ್ದು, ಎಲ್ಲರೂ ತಮ್ಮ ಮಕ್ಕಳ ಜನನ ಪ್ರಮಾಣಪತ್ರಗಳನ್ನು ಪಡೆದುಕೊಳ್ಳಬೇಕು. ಮುಂದೆ ಅಗತ್ಯವಿದ್ದಾಗ ಪ್ರಮಾಣಪತ್ರ ಬೇಕೆಂದರೆ ಸಿಗುವುದಿಲ್ಲ. ಮುಂಚಿತವಾಗಿಯೇ ಪಡೆದುಕೊಂಡರೆ ಸಮಸ್ಯೆ ಆಗುವುದಿಲ್ಲ’ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ಉಪಾಧ್ಯಕ್ಷ ಜಗನ್ನಾಥ ಗಂಜಗಿರಿ, ವಕೀಲ ರವೀಂದ್ರ ಹೂವಿನಭಾವಿ, ಅಭಿಯೋಜಕ ಶಾಂತಕುಮಾರ ಪಾಟೀಲ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.