ADVERTISEMENT

‘ಬಂಡವಾಳಶಾಹಿಗೆ ಸಮಾಜವಾದಿ ಕ್ರಾಂತಿ ಉತ್ತರ’

ವಾಡಿ: ಎಐಡಿಎಸ್‌ಒ, ಎಐಡಿವೈಒ ಸಂಘಟನೆಗಳ ನೇತೃತ್ವದಲ್ಲಿ ನೇತಾಜಿ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 8:31 IST
Last Updated 3 ಫೆಬ್ರುವರಿ 2020, 8:31 IST
ವಾಡಿಯಲ್ಲಿ ನಡೆದ ನೇತಾಜಿ ಜನ್ಮದಿನಾಚರಣೆಯಲ್ಲಿ ಎಸ್‌ಯುಸಿಐ ಪಕ್ಷದ ರಾಯಚೂರು ಜಿಲ್ಲಾ ಕಾರ್ಯದರ್ಶಿ ಚಂದ್ರಗಿರೀಶ ಮಾತನಾಡಿದರು
ವಾಡಿಯಲ್ಲಿ ನಡೆದ ನೇತಾಜಿ ಜನ್ಮದಿನಾಚರಣೆಯಲ್ಲಿ ಎಸ್‌ಯುಸಿಐ ಪಕ್ಷದ ರಾಯಚೂರು ಜಿಲ್ಲಾ ಕಾರ್ಯದರ್ಶಿ ಚಂದ್ರಗಿರೀಶ ಮಾತನಾಡಿದರು   

ವಾಡಿ: ‘ದೇಶದಲ್ಲಿ ಉಳ್ಳವರ ಮತ್ತು ಇಲ್ಲದವರ ನಡುವಿನ ಅಂತರ ಹೆಚ್ಚುತ್ತಿದೆ. ಇದಕ್ಕೆ ಪರ್ಯಾಯವಾಗಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಮಾತ್ರ ಉತ್ತರ ನೀಡಬಲ್ಲದು’ ಎಂದು ಎಸ್‌ಯುಸಿಐ (ಕಮ್ಯುನಿಷ್ಟ್) ಪಕ್ಷದ ರಾಯಚೂರು ಜಿಲ್ಲಾ ಕಾರ್ಯದರ್ಶಿ ಚಂದ್ರಗಿರೀಶ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿನೇತಾಜಿ ಸುಭಾಷಚಂದ್ರ್ ಬೋಸ್ ಅವರ 123ನೇ ಜನ್ಮದಿನಾಚರಣೆಯ ನಿಮಿತ್ತ ಈಚೆಗೆ ಎಐಡಿವೈಓ, ಎಐಡಿಎಸ್ಓ ಹಾಗೂ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಜಂಟಿಯಾಗಿ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಜನಪರ ಮುಖವಾಡ ಹೊತ್ತ ಬಂಡವಾಳಶಾಹಿ ಪೋಷಿತ ಸರ್ಕಾರಗಳು, ಜನರ ಹಿತ ಕೈಬಿಟ್ಟಿವೆ. ಇದಕ್ಕಾಗಿ ಜನರು ಇನ್ನೊಂದು ಕ್ರಾಂತಿಗೆ ಸಜ್ಜಾಗಬೇಕು. ಅದುವೇ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ. ಇದು ನೇತಾಜಿ ಸುಭಾಸ್ ಚಂದ್ರ ಭೋಸ್ ಅವರ ಕನಸಾಗಿತ್ತು ಎಂದರು.

ADVERTISEMENT

ದುಡಿಮೆಯಿಂದ ಸೃಷ್ಟಿಯಾದ ಸಂಪತ್ತು ದೇಶದ ಪ್ರತಿ ಪ್ರಜೆಗೂ ಸೇರುವಂತಾಗಬೇಕು. ಅಂತಹ ವ್ಯವಸ್ಥೆ ನಿರ್ಮಾಣವಾಗಬೇಕು ಎನ್ನುವುದು ನೇತಾಜಿ ಅವರ ಕನಸಾಗಿತ್ತು. ಅದಕ್ಕಾಗಿ ಐಎನ್ಎ ಸೈನ್ಯದ ಮೂಲಕ ಹೋರಾಟ ನಡೆಸಿದ್ದರು ಎಂದರು.

ಸಾಹಿತಿ ಕಾಶಿನಾಥ ಹಿಂದಿನಕೇರಿ ಮಾತನಾಡಿ, 'ಖಾಸಗೀಕರಣದ ಭೂತ ತನ್ನ ಕಬಂಧ ಬಾಹುಗಳನ್ನು ಚಾಚಿ ಎಲ್ಲವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ನಿರುದ್ಯೋಗ ಎಲ್ಲೆಡೆ ತಾಂಡಾವಾಡುತ್ತಿದೆ. ದುಡ್ಡಿನ ಭರಾಟೆಯಲ್ಲಿ ಜನತಂತ್ರ ಕರಗಿ ಹೋಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಎಐಡಿಎಸ್ಒ ಜಿಲ್ಲಾ ಉಪಾಧ್ಯಕ್ಷೆ ಸ್ನೇಹಾ ಕಟ್ಟಿಮನಿ ನೇತಾಜಿ ಜೀವನ ಚರಿತ್ರೆ ಕುರಿತು ಮಾತನಾಡಿದರು.

ಎಐಡಿವೈಒ ಸ್ಥಳೀಯ ಕಾರ್ಯದರ್ಶಿ ಮಲ್ಲಿನಾಥ ಹುಂಡೆಕಲ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಗಳ ಸದಸ್ಯರಾದ ಗೌತಮ ಪರ್ತೂರಕರ, ಶರಣು.ವಿ.ಕೆ, ಆರ್.ಕೆ. ವೀರಭದ್ರಪ್ಪಾ, ಮುಖಂಡರಾದ ಗುಂಡಣ್ಣ ಎಮ್.ಕೆ ಶರಣು ಹೇರೂರ, ಶಿವಕುಮಾರ ಆಂದೋಲಾ, ಮಲ್ಲಣ ದಂಡಬಾ, ಶರಣು ದೋಶೆಟ್ಟಿ, ಶ್ರೀಶರಣ ಹೊಸಮನಿ, ಗೌತಮ ಪರತೂರಕರ, ಆರ್.ಜಿ.ವೆಂಕಟೇಶ, ರಾಜು ಒಡೆಯರ, ದವಲಪ್ಪ ದೋರೆ ಇದ್ದರು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.