ADVERTISEMENT

ಕಲಬುರಗಿ: ‘ದೇವರಿಗೇ ಕಾಯಕ ಹಚ್ಚಿದ ಚಂದಯ್ಯ‘

ಜಂಗಮ ದಾಸೋಹಿ ನುಲಿಯ ಚಂದಯ್ಯನ 918ನೇ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:30 IST
Last Updated 10 ಆಗಸ್ಟ್ 2025, 2:30 IST
ಕಲಬುರಗಿಯಲ್ಲಿ ನಲಿಯ ಚಂದಯ್ಯ ಜಯಂತಿ ಅಚರಣೆ ಅಂಗವಾಗಿ ಶನಿವಾರ ಎಸ್‌ವಿಪಿ ವೃತ್ತದ ಬಳಿ ಮೆರವಣಿಗೆ ನಡೆಯಿತು             ಪ್ರಜಾವಾಣಿ ಚಿತ್ರ 
ಕಲಬುರಗಿಯಲ್ಲಿ ನಲಿಯ ಚಂದಯ್ಯ ಜಯಂತಿ ಅಚರಣೆ ಅಂಗವಾಗಿ ಶನಿವಾರ ಎಸ್‌ವಿಪಿ ವೃತ್ತದ ಬಳಿ ಮೆರವಣಿಗೆ ನಡೆಯಿತು             ಪ್ರಜಾವಾಣಿ ಚಿತ್ರ    

ಕಲಬುರಗಿ: ‘ಶರಣರು ಚರಿತ್ರೆಗೆ ಆದ್ಯತೆ ಕೊಡಲಿಲ್ಲ, ಚಾರಿತ್ರ್ಯಕ್ಕೆ ಆದ್ಯತೆ ಕೊಟ್ಟರು. ಅವರಿಗೆ ಕಾಯಕವೇ ಕೈಲಾಸವಾಗಿತ್ತು. ಕಾಯಕದಲ್ಲಿ ತನ್ಮಯರಾಗಿ ದೇವರನ್ನೇ ಮರೆತು ಬಿಡುತ್ತಿದ್ದರು’ ಎಂದು ಕನ್ನಡ ಅಧ್ಯಾಪಕ ಡಿ.ಎನ್‌.ಪಾಟೀಲ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಆವರಣದಲ್ಲಿ ಶನಿವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯ ಜಯಂತಿಯಲ್ಲಿ ಅವರು ಮಾತನಾಡಿದರು.

‘ನುಲಿಯ ಚಂದಯ್ಯ ವಿಜಯಪುರ ಜಿಲ್ಲೆಯ ಶಿವಣಗಿಯವರು. ಹಗ್ಗ ಹೊಸೆಯುವ ಕೆಲಸ ಮಾಡುತ್ತಿದ್ದ ಚಂದಯ್ಯನ ಕೊರಳಿಂದ ಒಮ್ಮೆ ಲಿಂಗ ಜಾರಿಬಿತ್ತು. ಎತ್ತಿಕೊಳ್ಳೋ ಚಂದಯ್ಯ ಎಂದು ಲಿಂಗ ಹೇಳಿದರೆ, ಕಾಯಕದಲ್ಲಿ ನಿರತನಾಗಿದ್ದ ಚಂದಯ್ಯ ನಾನು ಬೀಳಿಸಿದೆನಾ, ನೀನು ಬಿದ್ದೆಯಾ? ಎಂದು ಚಂದಯ್ಯ ಪ್ರಶ್ನಿಸಿದ. ನಾನೇ ಬಿದ್ದೆ ಎಂದು ಲಿಂಗ ಹೇಳಿತು. ಹಾಗಾದರೆ ಕಲ್ಯಾಣಕ್ಕೆ ಹೋಗಿ ಈ ಹಗ್ಗ ಮಾರಿಕೊಂಡು ಬಾ, ಬಳಿಕ ಎತ್ತಿಕೊಳ್ಳುತ್ತೇನೆ’ ಎಂದು ಚಂದಯ್ಯ ಹೇಳಿದ. ದೇವರಿಗಿಂತ ಕಾಯಕಕ್ಕೆ ಮಹತ್ವ ಕೊಟ್ಟ ಚಂದಯ್ಯ ದೇವರಿಗೇ ಕೆಲಸ ಹಚ್ಚಿದ’ ಎಂದು ದೃಷ್ಟಾಂತದೊಂದಿಗೆ ವಿವರಿಸಿದರು.

ADVERTISEMENT

‘ಕ್ರಿ.ಶ. 1130ರಿಂದ 1200ವರೆಗೆ ಜೀವಿಸಿದ್ದ ಚಂದಯ್ಯನ ಸುಮಾರು 48 ವಚನಗಳು ದೊರೆತಿವೆ. ಚಂದೇಶ್ವರ ಲಿಂಗ ಅವರ ಅಂಕಿತನಾಮ. ಈಗಿನ ಮಕ್ಕಳಿಗೆ ಎ ಫಾರ್‌ ಆ್ಯಪಲ್‌, ಬಿ ಫಾರ್‌ ಬೋಟ್‌ ಬದಲಾಗಿ ಎ ಫಾರ್‌ ಆಯ್ದಕ್ಕಿ ಲಕ್ಕಮ್ಮ, ಬಿ ಫಾರ್‌ ಬಸವಣ್ಣ ಎಂದು ಬೋಧಿಸಬೇಕು ಎನ್ನುತ್ತಾ ಝಡ್‌ ಫಾರ್‌ ಜಗಳಗಂಟ ಕಾಮಣ್ಣನವರೆಗೆ ಆಂಗ್ಲಭಾಷೆಯ 26 ಅಕ್ಷರಗಳಿಗೂ ಒಬ್ಬೊಬ್ಬ ಶರಣರ ಹೆಸರು ಹೇಳಿದರು.

ಚಿಣಮಗೇರಾ ಮಹಾಂತೇಶ್ವರ ಮಠದ ವೀರಮಹಾಂತ ಶಿವಾಚಾರ್ಯರು ಮಾತನಾಡಿ, ಮನುಷ್ಯ ನಾನೆಂಬ ಅಹಂಕಾರ ತೊರೆಯಬೇಕು. ಕಾಯಕವೇ ಕೈಲಾಸ ಎಂಬುದು 12ನೇ ಶತಮಾನದ ಎಲ್ಲ ಶರಣರ ನುಡಿಯಾಗಿತ್ತು. ಸಮಾಜದ ಬಡವಿದ್ಯಾರ್ಥಿಗಳ ಓದಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೊರಮ ಸಮಾಜದ ಅಧ್ಯಕ್ಷ  ಹಣಮಂತ ಭಜಂತ್ರಿ ಕರಜಗಿ, ತಾಲ್ಲೂಕು ಅಧ್ಯಕ್ಷ ರಾಜಕುಮಾರ ಭಜಂತಿ ಮದಗುಣಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ಜಗದೀಶ್ವರಿ ಅ. ನಾಸಿ, ತಹಶೀಲ್ದಾರ್‌ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಗತ್‌ ಸರ್ಕಲ್‌ನಿಂದ ಕನ್ನಡಭವನದವರೆಗೆ ನುಲಿಯ ಚಂದಯ್ಯ ಭಾವಚಿತ್ರದ ಮೆರವಣಿಗೆ ನಡೆಯಿತು. 

ಭಜಂತ್ರಿ ಕೊರಮ ಕೊರವ ಎಂದು ದೇಶದ 18 ರಾಜ್ಯಗಳಲ್ಲಿ ಈ ಸಮಾಜವಿದೆ. ಧಾರ್ಮಿಕ ಮೂಢನಂಬಿಕೆಯಿಂದ ಹೊರಬರಬೇಕು. ಬದುಕಿನ ಹಕ್ಕಿಗಾಗಿ ಮಕ್ಕಳಿಗೆ ಶಿಕ್ಷಣ ಕೊಡಿ
– ಸುನೀಲ ಮಾನ್ಪಡೆ, ಸಾಮಾಜಿಕ ಹೋರಾಟಗಾರ

ನಿವೇಶನಕ್ಕೆ ಮನವಿ

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಪುತ್ರ ಶರಣಗೌಡ ಪಾಟೀಲರಿಗೆ ನಾಲ್ಕು ಬೇಡಿಗಳ ಮನವಿ ಪತ್ರವನ್ನು ಸಮಾಜದವರು ಸಲ್ಲಿಸಿದರು.

‘ಪ್ರಮುಖವಾಗಿ ಸಮುದಾಯ ಭವನಕ್ಕಾಗಿ 100X100 ಅಳತೆಯ ನಿವೇಶನ ನೀಡಿ. ಸಮುದಾಯದ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ಸ್ಥಾಪನೆಯಾಗಬೇಕು’ ಎಂಬ ಬೇಡಿಕೆಗಳನ್ನು ಮಂಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.