
ವಾಡಿ: ಚಿತ್ತಾಪುರ ತಾಲ್ಲೂಕಿನ ವಿದ್ಯಾರ್ಥಿಗಳು ಬಿ.ಎಸ್ಸಿ ಎಸ್ಸಿ ನರ್ಸಿಂಗ್ ಪದವಿಯನ್ನು ಸ್ಥಳೀಯವಾಗಿಯೇ ಪಡೆಯಲು ಸರ್ಕಾರಿ ಕಾಲೇಜು ಸ್ಥಾಪನೆಯ ಅವಶ್ಯಕತೆ ಇದೆ. ಸಾರ್ವಜನಿಕರಿಗೆ ಸಕಾಲಕ್ಕೆ ಅರೋಗ್ಯ ಸೇವೆ ದೊರೆಯುತ್ತಿಲ್ಲ ಎಂಬ ಸಮಸ್ಯೆಗೆ ನರ್ಸಿಂಗ್ ಕಾಲೇಜು ಮದ್ದೆರೆಯಲಿದೆ.
ಅವಿಭಜಿತ ಚಿತ್ತಾಪುರ ತಾಲ್ಲೂಕಿನಿಂದ ಪ್ರತಿವರ್ಷ ಸುಮಾರು 3000 ವಿದ್ಯಾರ್ಥಿಗಳು ಪದವಿಪೂರ್ವ ಅಭ್ಯಾಸ ಮುಗಿಸಿ ಪದವಿ ಕಾಲೇಜಿಗೆ ಬರುತ್ತಾರೆ. ಅದರಲ್ಲಿ ಬಹುಬೇಡಿಕೆಯ 4 ವರ್ಷದ ನರ್ಸಿಂಗ್ ಕಲಿಕೆ ಬಯಸುವ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಸರ್ಕಾರಿ ಮತ್ತು ಖಾಸಗಿಯಾಗಿ ಕಲಿಯಲು ಅವಕಾಶ ಇಲ್ಲ. ಇದರಿಂದ ನರ್ಸಿಂಗ್ ಪದವಿ ಪಡೆಯಬೇಕು ಎನ್ನುವ ಸ್ಥಳೀಯ ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಕಾಲೇಜು ಕೊರತೆ ಕಾಡುತ್ತಿದೆ.
ಪ್ರಸ್ತುತ 100 ಹಾಸಿಗೆಯಿಂದ 150 ಹಾಸಿಗೆಯುಳ್ಳ ಸುಸುಜ್ಜಿತ ಆಸ್ಪತ್ರೆಯನ್ನಾಗಿ ಸ್ಥಳೀಯ ತಾಲ್ಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗಿದ್ದು ಅದಕ್ಕೆ ತಕ್ಕುದಾಗಿ ವೈದ್ಯರ ಸಮಸ್ಯೆ ಕಾಡುತ್ತಿದೆ. ನರ್ಸಿಂಗ್ ಕಾಲೇಜು ಸ್ಥಾಪಿಸಿದರೆ ತರಬೇತಿಗಾಗಿ ಬರುವ ನರ್ಸ್ಗಳನ್ನೇ ತಾಲ್ಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗೆ ಬಳಸಿಕೊಳ್ಳಬಹುದಾಗಿದೆ. ಇದರಿಂದ ಅರೋಗ್ಯ ಸಮಸ್ಯೆ ನೀಗಿ ಉತ್ತಮ ವೈದ್ಯಕೀಯ ಸೌಲಭ್ಯ ನೀಡಬಹುದಾಗಿದೆ.
ಸ್ಥಳೀಯವಾಗಿ ನರ್ಸಿಂಗ್ ಕಾಲೇಜು ಇಲ್ಲದ ಕಾರಣ ತಾಲ್ಲೂಕಿನ ವಿದ್ಯಾರ್ಥಿಗಳು ದೂರದ ಬೆಂಗಳೂರು, ಧಾರವಾಡ, ಕಲಬುರಗಿ, ಯಾದಗಿರಿ ರಾಯಚೂರು ಜಿಲ್ಲೆಗಳಿಗೆ ತೆರಳಬೇಕಿದೆ. ಆರ್ಥಿಕ ಹೊರೆಯಿಂದ ನರ್ಸಿಂಗ್ ಕನಸು ಕೈ ಬಿಟ್ಟು ಅನ್ಯ ಪದವಿ ಕಡೆ ವಾಲುವಂತಾಗಿದೆ.
‘ತಾಲ್ಲೂಕಿನಲ್ಲಿ ನರ್ಸಿಂಗ್ ಕಾಲೇಜು ಇಲ್ಲದ ಕಾರಣ ಅನಿವಾರ್ಯವಾಗಿ ಬಿ.ಎಸ್ಸಿ ಪದವಿ ಮಾಡಿದ್ದೇನೆ. ಕಾಲೇಜು ಸ್ಥಾಪನೆಯಾದರೆ ಬಡ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ’ ಎನ್ನುತ್ತಾರೆ ಚಿತ್ತಾಪುರ ಪದವೀಧರ ವಿದ್ಯಾರ್ಥಿನಿ ಶ್ರೇಯಾ.
‘ಚಿತ್ತಾಪುರ ಶಹಾಬಾದ ಮತ್ತು ಕಾಳಗಿ ತಾಲ್ಲೂಕುಗಳ ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಚಿತ್ತಾಪುರ ಪಟ್ಟಣದಲ್ಲಿ ನರ್ಸಿಂಗ್ ಕಾಲೇಜು ಸ್ಥಾಪನೆಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಮಂಜೂರು ಮಾಡಿಸಬೇಕು’ ಎನ್ನುವುದು ಹಲವರ ಒತ್ತಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.