ಕಮಲಾಪುರ: ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಸವಲತ್ತುಗಳನ್ನು ಒದಗಿಸಲು ‘ನಮ್ಮ ನಡೆ ಹಳ್ಳಕಡೆ’ ಅಭಿಯಾನದ ಮೂಲಕ ಗ್ರಾಮ, ಹಳ್ಳಗಳಲ್ಲಿ ಸಾರ್ವಜನಿಕ ಆಡಳಿತ ಕೊಂಡೊಯ್ಯಲಾಗುತ್ತಿದೆ ಎಂದು ಕಮಲಾಪುರ ಗ್ರೇಡ್ 2 ತಹಶೀಲ್ದಾರ ಗಂಗಾಧರ ಪಾಟೀಲ ತಿಳಿಸಿದರು.
ತಾಲ್ಲೂಕಿನ ಯಕ್ಕಂಚಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಂಚಾಯತ ರಾಜ್, ಕಂದಾಯ, ಕೃಷಿ, ಶಿಕ್ಷಣ, ಸಾಮಾಜಿಕ ಭದ್ರತಾ ಯೋಜನೆಗಳು ಸೇರಿದಂತೆ ಅನೇಕ ಕಾರ್ಯಗಳಿಗಾಗಿ ಸಾರ್ವಜನಿಕರಿಗೆ ತಾಲ್ಲೂಕು ಜಿಲ್ಲಾ ಕೇಂದ್ರಗಳಿಗೆ ಅಲೆಯಲು ಆಗುವುದಿಲ್ಲ. ಕೆಲಸಗಳು ನನೆಗುದಿಗೆ ಬಿದ್ದು ಅನೇಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತವೆ. ಇದನ್ನು ಮನಗಂಡ ಜಿಲ್ಲಾಡಳಿತ ‘ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ’ ಕಾರ್ಯಕ್ರಮ ಹಾಕಿಕೊಂಡಿದೆ. ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಸಮಸ್ಯೆ ಆಲಿಸಲಿದ್ದು, ಸಾಧ್ಯವಾದರೆ ಸ್ಥಳದಲ್ಲೆ ಇತ್ಯರ್ಥ ಮಾಡುತ್ತಾರೆ. ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಬೇಕು ಎಂದರು.
ಸಂಧ್ಯಾ ಸುರಕ್ಷಾ 3, ವೃದ್ಧಾಪ್ಯ ವೇತನ 7, ವಿಧವಾ ವೇತ 2, ಪಹಣಿ ತಿದ್ದುಪಡಿ 4, ಇತರೆ 19 ಅರ್ಜಿಗಳು ಸೇರಿ ಒಟ್ಟು 33 ಅರ್ಜಿಗಳು ಕಾರ್ಯಕ್ರಮದಲ್ಲಿ ಸ್ವೀಕೃತವಾಗಿದೆ.
ಗ್ರೇಡ್ 2 ತಹಶೀಲ್ದಾರ್ ಗಂಗಾಧರ ಪಾಟೀಲ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಮಂಗಾಣಿ, ಪಶುಸಂಗೋಪನೆ ಸಹಾಯಕ ನಿರ್ದೇಶಕ ಡಾ.ಹುಸೇನ್, ಉಪ ತಹಶೀಲ್ದಾರ್ ನಿಸಾರ ಅಹಮದ್, ಕ್ಷೇತ್ರ ಸಮನ್ವಯಾಧಿಕಾರಿ ಶಾಂತಾಬಾಯಿ ಬಿರಾದಾರ, ವೈದ್ಯಾಧಿಕಾರಿ ವಾಣಿ ಪಾಗಾ, ಕೃಷಿ ಅಧಿಕಾರಿ ವಿಜಯಲಕ್ಷ್ಮಿ ಜೈನಾಪುರ, ಪಿಡಿಒ ಅಭಿಜೀತ್, ಕಂದಾಯ ನಿರೀಕ್ಷಕ ಮಂಜುನಾಥ ಬಿರಾದಾರ, ಮಖ್ಬುಲ್ ಪಟೇಲ್, ಗ್ರಾಮ ಲೆಕ್ಕಾಧಿಕಾರಿ ಇಮಾಮ್ ಹುಸೇನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.