ADVERTISEMENT

ಅಧಿಕಾರಿಗಳ ದಿಢೀರ್ ವರ್ಗಾವಣೆ, ನಿಯೋಜನೆ

ಚಿತ್ತಾಪುರ: ಆಡಳಿತ ವಲಯದಲ್ಲಿ ತೀವ್ರ ಆತಂಕ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 10:04 IST
Last Updated 3 ಜೂನ್ 2020, 10:04 IST

ಚಿತ್ತಾಪುರ (ಕಲಬುರ್ಗಿ): ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅನಿತಾ ಪೂಜಾರಿ ಅವರನ್ನು ರಾಜ್ಯ ಸರ್ಕಾರ ದಿಢೀರ್ ಆಗಿ ಸೋಮವಾರ ಬೆಂಗಳೂರಿಗೆ ನಿಯೋಜನೆ ಮಾಡಿರುವುದು ಆಡಳಿತ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಅಚ್ಚರಿ ಮೂಡಿಸಿದೆ.

ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀಧರ್ ಅವರನ್ನು ವಾರದ ಹಿಂದೆ ದಿಢೀರ್ ವರ್ಗಾವಣೆ ಮಾಡಿ ಮಂಡ್ಯಕ್ಕೆ ಸ್ಥಳ ನಿಯುಕ್ತಿ ಮಾಡಲಾಗಿತ್ತು. ಈಗ ತಾಲ್ಲೂಕು ಪಂಚಾಯಿತಿ ಅಧಿಕಾರಿ ನಿಯೋಜನೆಯಿಂದ ಆಡಳಿತ ವಲಯದಲ್ಲಿ ಆತಂಕ ಮೂಡಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಈ ಹಿಂದೆ ತಹಶೀಲ್ದಾರ್ ಉಮಾಕಾಂತ ಹಳ್ಳೆ ಹಾಗೂ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರನ್ನು ವರ್ಗಾವಣೆ ಮಾಡಲಾಗಿತ್ತು. ತಹಶೀಲ್ದಾರ್ ಅವರು ಕೆಎಟಿ ಪೀಠಕ್ಕೆ ಹೋಗಿ ವರ್ಗಾವಣೆ ಆದೇಶದ ವಿರುದ್ಧ ತಡೆಯಾಜ್ಞೆ ತಂದು ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಪೊಲೀಸ್ ಇಲಾಖೆಯು ಸಿಪಿಐ ಪಂಚಾಕ್ಷರಿ ಅವರ ವರ್ಗವಾಣೆ ಆದೇಶ ರದ್ದು ಮಾಡಿದ್ದರಿಂದ ಅವರು ತಮ್ಮ ಹುದ್ದೆಯ ಸೇವೆಯಲ್ಲಿ ಮುಂದುವರಿದಿದ್ದಾರೆ.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಢವಳಗಿ ಅವರನ್ನೂ ಈ ಹಿಂದೆ ವರ್ಗಾವಣೆ ಮಾಡಲಾಗಿತ್ತು.

ನಂತರ ಅವರು ಕೆಎಟಿ ಪೀಠದ ಮೊರೆ ಹೋಗಿ ತಡೆಯಾಜ್ಞೆ ಪಡೆದುಕೊಂಡಿದ್ದರು. ನಂತರ ಶಿಕ್ಷಣ ಇಲಾಖೆ ಅವರ ವರ್ಗಾವಣೆ ಆದೇಶ ರದ್ದು ಮಾಡಿ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದ್ದರಿಂದ ಢವಳಗಿ
ಅವರು ಸೇವೆಯಲ್ಲಿ ಮುಂದುವರಿದಿದ್ದಾರೆ.

ಕೊರೊನಾ ಕರ್ತವ್ಯ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಎಸಗಿರುವ ಆರೋಪ ಹೊರಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ರಾಜಕುಮಾರ ರಾಠೋಡ್ ಹಾಗೂ ವಾಡಿ ಪೊಲೀಸ್ ಠಾಣೆಯ ಪಿಎಸ್ಐ ವಿಜಯಕುಮಾರ ಭಾವಗಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ನಂತರ ಇಬ್ಬರೂ ಅಧಿಕಾರಿಗಳನ್ನು ಹುದ್ದೆಯಲ್ಲಿ ಮುಂದುವರಿಯುವಂತೆ ಆದೇಶ ಮಾಡಿದ್ದರಿಂದ ತಮ್ಮ ಮೊದಲಿನ ಹುದ್ದೆಯಲ್ಲಿ ಕರ್ತವ್ಯ ನಿರತರಾಗಿದ್ದಾರೆ.

ಆರೇಳು ತಿಂಗಳಲ್ಲಿ ಅಧಿಕಾರಿಗಳ ವರ್ಗಾವಣೆ, ವರ್ಗಾವಣೆ ರದ್ದು, ನಿಯೋಜನೆ ಮಾಡುವುದು ನಡೆದಿದ್ದರಿಂದ ಅಧಿಕಾರಿಗಳು ಯಾವಾಗ ಯಾವ ಆದೇಶ ಬರುತ್ತದೆಯೊ ಎನ್ನುವ ಆತಂಕದಲ್ಲಿಯೆ ಕೆಲಸ ಮಾಡುವ ಪರಿಸ್ಥಿತಿ ಇದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.