ಕಾಳಗಿ: ಆಂಧ್ರಪ್ರದೇಶ ಸರ್ಕಾರದ ಆಧೀನದಲ್ಲಿರುವ ಟಿ.ಟಿ.ಡಿ ಮಂಡಳಿಯು ತಿರುಪತಿ ದೇವಸ್ಥಾನದ ಆಸ್ತಿ ಮಾರಾಟ ಮಾಡಲು ನಿರ್ಧರಿಸಿರುವುದನ್ನು ವಿರೋಧಿಸಿ, ಶ್ರೀರಾಮ ಸೇನೆ ತಾಲ್ಲೂಕು ಘಟಕದ ಸದಸ್ಯರು ಆಂಧ್ರಪ್ರದೇಶದ ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಬುಧವಾರ ಗ್ರೇಡ್-2 ತಹಶೀಲ್ದಾರ್ ಶಾಂತಗೌಡ ಬಿರಾದಾರ ಮೂಲಕ ರವಾನಿಸಿದರು.
ದೇವಸ್ಥಾನದ ಆಸ್ತಿ ಮಾರಾಟ ಮಾಡುವ ಪ್ರಕ್ರಿಯೆ ಹಿಂದೂ ಧರ್ಮದ ಭಕ್ತ ಸಮೂಹಕ್ಕೆ ಮಾಡುವ ದ್ರೋಹವಾಗಿದೆ. ದೇವಸ್ಥಾನದ ಯಾವುದೇ ಆಸ್ತಿ, ಸಂಪತ್ತಿನ ಮಾರಾಟ, ಒತ್ತೆ ಇಡುವುದು ಮುಂತಾದವನ್ನು ರದ್ದುಗೊಳಿಸಬೇಕು. ಇನ್ನು ಮುಂದೆ ಇದು ನಡೆಯದಂತೆ ಕಾನೂನು ರಚಿಸಬೇಕು. ಜಾತ್ಯತೀತ ರಾಷ್ಟ್ರದಲ್ಲಿ ಕೇವಲ ಹಿಂದೂ ಧರ್ಮದ ಆಸ್ತಿ ತೆಗೆದುಕೊಳ್ಳುತ್ತಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಮನವಿಪತ್ರದಲ್ಲಿ ತಿಳಿಸಿದ್ದಾರೆ.
ಹಿರೇಮಠದ ಪೀಠಾಧಿಪತಿ ಪೂಜ್ಯ ಶಿವಬಸವ ಶಿವಾಚಾರ್ಯರು, ಶ್ರೀರಾಮ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಕಾಳಪ್ಪ ಕರೆಮನೋರ, ಜಗದೀಶ ಪಾಟೀಲ, ಅಮೃತರಾವ ಪಾಟೀಲ, ಸುನೀಲ ರಾಜಾಪುರ ಇದ್ದರು.
ಜೇವರ್ಗಿ ವರದಿ: ಟಿ.ಟಿ.ಡಿ ಆಡಳಿತ ಮಂಡಳಿಯು ತಿರುಪತಿ ತಿಮ್ಮಪ್ಪನ ಆಸ್ತಿ ಮಾರಾಟ ಮಾಡಲು ಹೊರಟಿರುವುದನ್ನು ವಿರೋಧಿಸಿ, ಶ್ರೀರಾಮ ಸೇನೆ ತಾಲ್ಲೂಕು ಘಟಕದ ವತಿಯಿಂದ ತಹಶೀಲ್ದಾರ್ ಸಿದರಾಯ ಭೋಸಗಿ ಮೂಲಕ ಆಂಧ್ರದ ರಾಜ್ಯಪಾಲರಿಗೆ ಬುಧವಾರ ಮನವಿಪತ್ರ ಕಳುಹಿಸಲಾಯಿತು. ಸಂಘಟನೆಯ ತಾಲ್ಲೂಕು ಘಟಕದ ಅದ್ಯಕ್ಷ ಈಶ್ವರ ಹಿಪ್ಪರಗಿ, ಭಗವಂತ ಮೈನಾಳ, ಸಿದ್ದು ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.