ಕಲಬುರ್ಗಿ: ಇಲ್ಲಿನ ಖಾಜಾ ಬಂದಾನವಾಜ್ ಆಸ್ಪತ್ರೆಯಲ್ಲಿ (ಕೆಬಿಎನ್) ಶನಿವಾರ ಸಂಜೆ ಮೂವರು ಕೋವಿಡ್ ರೋಗಿಗಳು ಏಕಕಾಲಕ್ಕೆ ಮೃತಪಟ್ಟಿದ್ದು, ಆಕ್ಸಿಜನ್ ಕೊರತೆಯಿಂದ ಬೇರೆಡೆ ಸ್ಥಳಾಂತರಿಸುವ ಸಂದರ್ಭದಲ್ಲಿ ಈ ಅವಘಡ ನಡೆದಿದೆ ಎಂದು ದೂರಲಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಆಕ್ಸಿಜನ್ ಸಿಲಿಂಡರ್ಗಳನ್ನು ಕಳಿಸಿಕೊಟ್ಟಿದ್ದಾರೆ.
ಕೆಬಿಎನ್ ಆಸ್ಪತ್ರೆಯ ಐಸಿಯು ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಲ್ಲಿ ಕೆಲವರು ಆಕ್ಸಿಜನ್ ಸಹಾಯ ಪಡೆದಿದ್ದರು. ಇನ್ನೇನು ಆಕ್ಸಿಜನ್ ದಾಸ್ತಾನು ಮುಗಿಯುತ್ತದೆ ಎನ್ನುವಾಗ ಆಂಬುಲೆನ್ಸ್ನಲ್ಲಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೂವರು ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ‘ಜಿಲ್ಲಾ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ತಂಡವನ್ನು ಕಳುಹಿಸಿಕೊಟ್ಟಿದ್ದೇವೆ. ಪ್ರಾಥಮಿಕ ವರದಿಗಳ ಪ್ರಕಾರ ಮೂವರು ಮೃತಪಟ್ಟಿದ್ದಾರೆ. ಆದರೆ, ಆಕ್ಸಿಜನ್ ಸಮಸ್ಯೆ ಇರಲಿಲ್ಲ ಎಂದು ಕೆಬಿಎನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ. ಆಕ್ಸಿಜನ್ ಅಗತ್ಯವಿದ್ದರೆ ಅವರು ಕರೆ ಮಾಡುತ್ತಿದ್ದರು. ಶುಕ್ರವಾರವೇ ಬೀದರ್ನಿಂದ ನಾವು ಆಕ್ಸಿಜನ್ ಟ್ಯಾಂಕರ್ ತರಿಸಿಕೊಂಡಿದ್ದೆವು. ಶನಿವಾರವೂ ಆಕ್ಸಿಜನ್ ಸಮಸ್ಯೆ ಇರಲಿಲ್ಲ. ತನಿಖೆಯ ಬಳಿಕವೇ ಸ್ಪಷ್ಟ ಮಾಹಿತಿ ಗೊತ್ತಾಗಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.