ADVERTISEMENT

ಬೆಂಗಳೂರಿಗೆ ಪಾದಯಾತ್ರೆ ಜ.6ರಿಂದ: ಪ್ರಣವಾನಂದ ಸ್ವಾಮೀಜಿ

ಕರದಾಳ ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 5:04 IST
Last Updated 7 ಅಕ್ಟೋಬರ್ 2025, 5:04 IST
ಪ್ರಣವಾನಂದ ಸ್ವಾಮೀಜಿ
ಪ್ರಣವಾನಂದ ಸ್ವಾಮೀಜಿ   

ಕಲಬುರಗಿ: ‘ಈಡಿಗ, ಬಿಲ್ಲವ, ನಾಮಧಾರಿ, ಧೀವರು ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನವರಿ 6ರಂದು ಚಿತ್ತಾಪುರ ತಾಲ್ಲೂಕಿನ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠ ಕರದಾಳದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಲಾಗುವುದು’ ಎಂದು ಕರದಾಳದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಹೇಳಿದರು.

‘ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಕೂಡಲೇ ₹500 ಕೋಟಿ ಅನುದಾನ ಬಿಡುಗಡೆ ಸೇರಿದಂತೆ 12 ಬೇಡಿಕೆಗಳ ಈಡೇರಿಕೆಗಾಗಿ ಈ ಪಾದಯಾತ್ರೆ ನಡೆಸಲಾಗುತ್ತಿದೆ. ಪಾದಯಾತ್ರೆಯು ಕರದಾಳದಿಂದ ಚಿತ್ತಾಪುರ, ವಾಡಿ, ಶಹಾಬಾದ್‌, ಜೇವರ್ಗಿ, ಶಹಾಪುರ, ಸುರಪುರ, ಲಿಂಗಸುಗೂರು, ತಾವರಗೆರೆ, ಕುಷ್ಟಗಿ, ಕೊಪ್ಪಳ, ಗಂಗಾವತಿ, ಹೊಸಪೇಟೆ, ಚಿತ್ರದುರ್ಗದ ಮೂಲಕ ಬೆಂಗಳೂರು ತಲುಪಲಿದೆ. ಪಾದಯಾತ್ರೆಗೆ ಚಾಲನೆ ಸಂದರ್ಭದಲ್ಲಿ ಗೋವಾದ ಕೇಂದ್ರ ಸಚಿವ ಶ್ರೀಪಾದ ನಾಯಕ ಪಾಲ್ಗೊಳ್ಳುವರು’ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಪಾದಯಾತ್ರೆಯಲ್ಲಿ 700 ಕಿಮೀಗಳನ್ನು ನಿತ್ಯ 20 ಕಿಮೀನಂತೆ ಕ್ರಮಿಸುವ ಉದ್ದೇಶವಿದೆ. ಬೆಳಿಗ್ಗೆ 6ರಿಂದ 11 ಗಂಟೆ ಹಾಗೂ ಸಂಜೆ 4ರಿಂದ 7 ಗಂಟೆ ತನಕ ಪಾದಯಾತ್ರೆ ನಡೆಯಲಿದೆ. ಈ ಪಾದಯಾತ್ರೆ ಕುರಿತು ಚರ್ಚಿಸಲು ಕಲ್ಯಾಣ ಕರ್ನಾಟಕ ಪೂರ್ವಭಾವಿ ಸಭೆಯು ನವೆಂಬರ್‌ 2ರಂದು ಬೆಳಿಗ್ಗೆ 10 ಗಂಟೆ ಕಲಬುರಗಿಯ ಜಗತ್ ವೃತ್ತದ ಆಮಂತ್ರಣ ಹೋಟೆಲ್‌ ಸಭಾಂಗಣದಲ್ಲಿ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಕುಲಕಸುಬು ಕಳೆದುಕೊಂಡ ಕಲ್ಯಾಣ ಕರ್ನಾಟಕ ಈಡಿಗರಿಗೆ 5 ಎಕರೆ ಜಮೀನು ನೀಡಬೇಕು. ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸಬೇಕು. ನಾರಾಯಣಗುರುಗಳ ಪ್ರತಿಮೆಯನ್ನು ಬೆಂಗಳೂರಿನ ವಿಧಾನಸೌಧದ ಎದುರು ಪ್ರತಿಷ್ಠಾಪಿಸಬೇಕು ಎಂಬುದು ಸೇರಿ ಹಲವು ಬೇಡಿಕೆಗಳು ಇವೆ. ಅವುಗಳಿಗೆ ಸರ್ಕಾರ ಸ್ಪಂದಿಸುವ ತನಕ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರದಾಳ ಶಕ್ತಿಪೀಠದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಗುಂಡಾನೂರ, ಟ್ರಸ್ಟಿಗಳಾದ ವೆಂಕಟೇಶ ಕಡೇಚೂರ, ಅಶೋಕ ಭೀಮಳ್ಳಿ, ರಮೇಶ ಗುತ್ತೇದಾರ, ಮಲ್ಲಿಕಾರ್ಜುನ ಕುಕ್ಕಂದಿ, ಮಹೇಶ ಹೊಳಕುಂದಾ, ಸದಾನಂದ ಪೆರ್ಲಾ ಇದ್ದರು.

ರಾಜಕಾರಣಿಗಳು ತಮ್ಮ ರಾಜಕೀಯ ತೆವಲಿಗಾಗಿ ಜಯ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಪೀಠದಿಂದ ಕೆಳಗಿಸಿದ್ದು ಸರಿಯಲ್ಲ. ಅವರನ್ನು ಮತ್ತೆ ಪೀಠದಲ್ಲಿ ಕೂರಿಸಲು ಆ ಸಮುದಾಯವರು ಶ್ರಮಿಸಬೇಕು
ಪ್ರಣವಾನಂದ ಸ್ವಾಮೀಜಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠ ಕರದಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.