ಕಲಬುರಗಿ: ಅಫಜಲಪುರ ತಾಲ್ಲೂಕಿನ ಗಾಣಗಾಪುರದ ದತ್ತ ಮಹಾರಾಜರ ದೇವಸ್ಥಾನ ಸಮೀಪದ ಧಾರ್ಮಿಕ ತಾಣದಲ್ಲಿ ರೌಡಿಯೊಬ್ಬ ಭಕ್ತರಿಗೆ ಕಾಲಿನಿಂದ ಒದ್ದು, ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ದೇವಸ್ಥಾನದ ಸಮೀಪದ ಔದುಂಬರ ವೃಕ್ಷದ ಕೆಳಗೆ ಭಕ್ತರು ಕೂತು ದತ್ತ ಚರಿತ್ರೆಯ ಪಾರಾಯಣ ಮಾಡುತ್ತಿದ್ದರು. ಅದೇ ಸಮಯದಲ್ಲಿ ಬಂದ ಗಾಣಗಾಪುರದ ನಿವಾಸಿ ರೌಡಿಶೀಟರ್ ಯಲ್ಲಪ್ಪ ಶಿವಪ್ಪ ಕಲ್ಲೂರ್ ಎಂಬಾತ ಭಕ್ತರ ತಲೆ ಮೇಲೆ ಕಾಲಿಟ್ಟು, ಹಲ್ಲೆ ಮಾಡಿ ದೌರ್ಜನ್ಯ ಎಸಗಿರುವ ದೃಶ್ಯಗಳು ವಿಡಿಯೊದಲ್ಲಿ ದಾಖಲಾಗಿವೆ.
ಯಲ್ಲಪ್ಪ ಕಳೆದ ಕೆಲವು ವರ್ಷಗಳಿಂದ ಭಕ್ತರಿಗೆ ಕಿರುಕುಳ ನೀಡುತ್ತಿದ್ದು, ನಲವತ್ತಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಗಾಣಗಾಪುರ ಪೊಲೀಸರ ಆತನ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇ 27ರ ರಾತ್ರಿ ಮದ್ಯ ಕುಡಿದಿದ್ದ ಯಲ್ಲಪ್ಪ, ಆಂಧ್ರಪ್ರದೇಶದಿಂದ ಬಂದಿದ್ದ ಭಕ್ತರ ಜತೆಗೆ ವಾಗ್ವಾದ ನಡೆಸಿದ್ದ. ಆ ನಂತರ ಅಲ್ಲಿಯೇ ಮಲಗಿದ್ದ ಅರ್ಚಕರನ್ನು ಎಬ್ಬಿಸಿ ಅವರಿಗೂ ಅವಾಚ್ಯ ಪದಗಳಿಂದ ನಿಂದಿಸಿದ್ದ. ಅರ್ಚಕರ ತಲೆಯ ಮೇಲೆ ಕಾಲಿಟ್ಟು ವಿಕೃತಿ ಮೆರೆದಿದ್ದ ವಿಡಿಯೊ ಹರಿದಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.