ಸೇಡಂ:ಕಬ್ಬು ಬೆಳೆಗಾರರ ಆಶಾಕಿರಣವಾದ ಚಿಂಚೋಳಿಯ ಸಿದ್ಧಸಿರಿ ಎಥೆನಾಲ್ ಕಂಪೆನಿ ಪ್ರಾರಂಭಿಸಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಪತ್ರ ಕೊಡಲು ತೆರಳುತ್ತಿದ್ದ ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಸೇರಿದಂತೆ ರೈತರನ್ನು ಮಳಖೇಡ ಬಳಿ ಪೊಲೀಸರು ಮಂಗಳವಾರ ತಡೆದರು.
ಇದರಿಂದ ಆಕ್ರೋಶಗೊಂಡ ರೈತರು ರಾಜ್ಯ ಹೆದ್ದಾರಿ-10 ಕಲಬುರಗಿ-ರಿಬ್ಬನಪಲ್ಲಿ ರಸ್ತೆ ಮೇಲೆಯ ಪೊಲೀಸರ ಜೊತೆಗೆ ಕೆಲ ಕಾಲ ವಾಗ್ವಾದಕ್ಕಿಳಿದರು. ನಂತರ ರಸ್ತೆ ಮೇಲೆಯೇ ಕೆಲ ಗಂಟೆಗಳ ಕಾಲ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ಕಾಂಗ್ರೆಸ್ ಸರ್ಕಾರ ರೈತರಿಗೆ ಅನ್ಯಾಯವನ್ನು ಮಾಡುತ್ತಿದೆ. ಚಿತ್ತಾಪುರ ಚಿಂಚೋಳಿ ಕಾಳಗಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ರೈತರು ಲಕ್ಷಾಂತರ ಹೆಕ್ಟೇರ್ ಕಬ್ಬು ಬೆಳೆದಿದ್ದಾರೆ. ಕಬ್ಬು ನುರಿಸುವ ಸಿದ್ಧಸಿರಿ ಎಥೆನಾಲ್ ಕಂಪೆನಿ ಪ್ರಾರಂಭಕ್ಕೆ ಸರ್ಕಾರ ಅನುಮತಿ ಕೊಡುತ್ತಿಲ್ಲ. ಹೀಗಾಗಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಕೊಡಲು ತೆರಳುತ್ತಿದ್ದೆವು. ಆದರೆ ರಾಜಕೀಯ ಪ್ರೇರಿತವಾಗಿ ನಮ್ಮನ್ನು ತಡೆಯಲಾಗಿದೆ’ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಶರಣು ಮೆಡಿಕಲ್, ಬಿ.ಆರ್ ಪಾಟೀಲ ಸಂಗಾವಿ, ಓಂಪ್ರಕಾಶ ಪಾಟೀಲ ತರನಳ್ಳಿ, ಮಲ್ಲಿಕಾರ್ಜುನ ಕೊಡದೂರ, ತಿರುಪತಿ ಶಾಬಾದಕರ್, ಅಯ್ಯನಗೌಡ ಪಾಟೀಲ ತೆಲ್ಕೂರ, ರಾಜು ಕಟ್ಟಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.