ADVERTISEMENT

ದಿಶಾ‌ ಸಭೆ: ಅಧಿಕಾರಿ ವಿರುದ್ಧ ಕ್ರಮಕ್ಕೆ ಸುನೀಲ್ ವಲ್ಯಾಪುರೆ ಪಟ್ಟು

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 8:40 IST
Last Updated 13 ಜೂನ್ 2022, 8:40 IST
   

ಕಲಬುರಗಿ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಬಗ್ಗೆ ತಪ್ಪು ಮಾಹಿತಿ ನೀಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನೀಲ ವಲ್ಯಾಪುರೆ ಕೇಂದ್ರ ರಾಸಾಯನಿಕ ‌ಮತ್ತು ರಸಗೊಬ್ಬರ ಸಚಿವ ಭಗವಂತ ಖೂಬಾ ಅವರಲ್ಲಿ ಪಟ್ಟು ಹಿಡಿದರು.

ನಗರದ‌ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣೆ ‌ಸಮಿತಿ (ದಿಶಾ) ಸಭೆಯಲ್ಲಿ ಪಿಎಂಜಿಎಸ್‌ವೈಅಧಿಕಾರಿ ಸುಭಾಷ್ ಅವರು ಶಹಾಬಾದ್ ಸಮೀಪದ ಬಂಕೂರವಾಡಲಡಾ-ಮುತ್ತಗಾ ಬಳಿ ಗ್ರಾಮೀಣ ರಸ್ತೆ ಮಾಡಿಲ್ಲ ಎಂದು ಹೇಳಿದರು.

ಇದರಿಂದ ಕೋಪಗೊಂಡ ವಲ್ಯಾಪುರೆ, ಕೇಂದ್ರದಿಂದ ₹ 3.5 ಕೋಟಿ ಬಿಡುಗಡೆ ಮಾಡಿದೆ. ಹಣ ಬಂದರೂ ರಸ್ತೆ ಮಾಡಿಲ್ಲವೇಕೆ? ಈ ಬಗ್ಗೆ ತಪ್ಪು ಮಾಹಿತಿ ನೀಡಿದ್ದೇಕೆ. ತಕ್ಷಣ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನಾನು ಸಭೆಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದರು.

ADVERTISEMENT

ಆಗ ಸಚಿವ ಖೂಬಾ, 'ಅಗತ್ಯ ಮಾಹಿತಿ ಪಡೆದು ಮಾತನಾಡಬೇಕು‌' ಎಂದು ಅಧಿಕಾರಿಗೆ ಸೂಚನೆ ನೀಡಿದರು.

ಇದರಿಂದ ಮತ್ತಷ್ಟು ಕೋಪಗೊಂಡ ವಲ್ಯಾಪುರೆ, 'ಇಷ್ಟು ಸಾವಧಾನವಾಗಿ ಹೇಳಿದರೆ ಹೇಗೆ? ತಕ್ಷಣ ಯಾವ ಕ್ರಮ ಜರುಗಿಸುತ್ತೀರಿ ಹೇಳಿ. ಇಷ್ಟು ಸಲುಗೆ ಕೊಟ್ಟರೆ ಹೇಗೆ' ಎಂದರು.

ಆಗ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಯಶವಂತ ವಿ‌. ಗುರುಕರ್, ಜನಪ್ರತಿನಿಧಿಗಳು ಒಂದು ವಿಷಯ ‌ಪ್ರಸ್ತಾಪಿಸುತ್ತಾರೆ ಎಂದರೆ ಸೂಕ್ತ ಮಾಹಿತಿ ‌ಇಟ್ಟುಕೊಂಡೇ ಹೇಳಿರುತ್ತಾರೆ. ಹಾಗಾಗಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯದೇ ‌ಮಾತನಾಡಬಾರದು ಎಂದು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.