ಕಲಬುರಗಿ: ಆರ್ಯ ಈಡಿಗ ಸಮಾಜಕ್ಕೆ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿ ಅಧ್ಯಕ್ಷ ಡಾ.ಪ್ರಣವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಬುಧವಾರ ಶಾಸಕರ, ಸಂಸದರ ಮನೆಗಳ ಮುಂದೆ ಪ್ರತಿಭಟನೆ ನಡೆಸಿದರು.
'ಸಮುದಾಯದ ಜನರಿಂದ ಮತ ಪಡೆದು ಗೆದ್ದು ಬಂದ ಜನಪ್ರತಿನಿಧಿಗಳು ಈಡಿಗ ಸಮುದಾಯದ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಸಮುದಾಯದ ಸ್ವಾಮೀಜಿ ಮನೆಯ ಮುಂದೆ ಬಂದು ನಿಂತರೂ ಸಂಸದ ಉಮೇಶ್ ಜಾಧವ ಅವರಿಗೆ ಐದು ನಿಮಿಷ ಸಮಯಕೊಡಲು ಆಗುತ್ತಿಲ್ಲವೇ ಎಂದು ಡಾ.ಪ್ರಣವಾನಂದ ಸ್ವಾಮೀಜಿ ಪ್ರಶ್ನಿಸಿದರು.
ಮೊಬೈಲ್ ಮೂಲಕ ಮಾತನಾಡಿದ ಸಂಸದ ಡಾ. ಉಮೇಶ್ ಜಾಧವ, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಆಗಮಿಸಿದ್ದಾರೆ. ಅವರೊಂದಿಗೆ ಸಭೆ ನಡೆಸುತ್ತಿದ್ದೇವೆ. ಕೆಲ ಹೊತ್ತಿನಲ್ಲಿ ಬರುತ್ತೇನೆ. ಅಲ್ಲಿಯವರೆಗೆ. ಮನೆಯಲ್ಲಿ ಕುರುವಂತೆ ಸಂಸದರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ, 'ನೀವು ಬಂದು ಮನವಿ ಆಲಿಸುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ. ಬೇಡಿಕೆಗಳ ಈಡೇರಿಕೆಗೆ ಇದುವರೆಗೂ ಸಾಕಷ್ಟು ಸಮಯ ಕೊಟ್ಟಿದ್ದೇವೆ. ಇನ್ನೂ ಕಾಯುವುದಿಲ್ಲ. ಮಧ್ಯಾಹ್ನ 2.30ರ ಒಳಗೆ ನೀವು ಎಲ್ಲಿಯೇ ಇದ್ದರೂ ಬರಲೇಬೇಕು' ಎಂದು ತಾಕೀತು ಮಾಡಿದರು.
ಸಂಸದರು ಬರುವ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರೊಂದಿಗೆ ಸ್ವಾಮೀಜಿ ಸಂಸದರ ಮನೆಯಿಂದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಬಿಜೆಪಿ ಮುಖಂಡ ಶಿವರಾಜ ರದ್ದೆವಾಡಿಗಿ ಅವರ ಮನೆಯತ್ತ ತೆರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.