
ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಿಂದ ಶಹಾಬಾದ್ ಪಟ್ಟಣದತ್ತ ಹೊರಟ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ
ಚಿತ್ತಾಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಕರದಾಳ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದಿಂದ ಬೆಂಗಳೂರಿನವರೆಗೆ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಕೈಗೊಂಡಿರುವ ಪಾದಯಾತ್ರೆಯ ಎರಡನೇ ದಿನವಾದ ಬುಧವಾರ ಬೆಳಿಗ್ಗೆ ಚಿತ್ತಾಪುರದಿಂದ ಶುರುವಾಯಿತು.
ನಾರಾಯಣಗುರು ಪ್ರತಿಮೆ ಹೊತ್ತ ಸಾರೋಟದೊಂದಿಗೆ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯು ಮೊದಲ ದಿನ ಕರದಾಳದಿಂದ 9 ಕಿ.ಮೀ ದಾರಿ ಕ್ರಮಿಸಿ ಚಿತ್ತಾಪುರ ತಲುಪಿತ್ತು. ಬಳಿಕ ಬಹಿರಂಗ ಸಭೆ ನಡೆದಿತ್ತು. ನಂತರ ಸ್ವಾಮೀಜಿ ಸೇರಿದಂತೆ ಪಾದಯಾತ್ರೆಯಲ್ಲಿ ಪಾಲ್ಗೊಂಡವರು ಪಟ್ಟಣದಲ್ಲಿಯೇ ವಾಸ್ತವ್ಯ ಹೂಡಿದ್ದರು.
ಬುಧವಾರ ಬೆಳಗ್ಗೆ ಸ್ವಾಮೀಜಿ ಪೂಜಾ ಕೈಂಕರ್ಯ, ಉಪಾಹಾರ ಮುಗಿಸಿಕೊಂಡು ನಾರಾಯಣ ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಎರಡನೇ ದಿನದ ಪಾದಯಾತ್ರೆಯು ಚಿತ್ತಾಪುರದಿಂದ ಶಹಾಬಾದ್ ನಗರದತ್ತ ಪಯಣಿಸಿತು.
ತಾಲ್ಲೂಕಿನ ಈಡಿಗ ಸಮಾಜದ ಮುಖಂಡರಾದ ಸುರೇಶ ಗುತ್ತೇದಾರ, ಶ್ರೀಮಂತ ಗುತ್ತೇದಾರ ಸೇರಿದಂತೆ ಅನೇಕರು ಸ್ವಾಮೀಜಿಯೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಸಾಥ್ ನೀಡಿದರು.
ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ಬಿಡುಗಡೆ, ಎಸ್ಟಿಗೆ ಸೇರ್ಪಡೆ ಸೇರಿ 18 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈಡಿಗ, ಬಿಲ್ಲವ, ನಾಮಧಾರಿ, ಧೀವರ, ತೀಯ ಒಳಗೊಂಡು 26 ಪಂಗಡಗಳು ಮತ್ತೆ ಹೋರಾಟ ಹಾದಿ ತುಳಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.