ಕಲಬುರ್ಗಿ: ‘ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿಯೇ ನಾನು ಸಾಯುತ್ತೇನೆ. ಒಂದು ವೇಳೆ ಸೇರ್ಪಡೆ ಮಾಡದಿದ್ದರೆ ಸಮಾಜದ ಜನರೇ ನನ್ನನ್ನು ಗಲ್ಲಿಗೇರಿಸಲಿ’ ಎಂದು ಬಿಜೆಪಿ ಮುಖಂಡ ಬಾಬುರಾವ ಚಿಂಚನಸೂರ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕಸಭೆ ಚುನಾವಣೆ ಬಳಿಕ ನವದೆಹಲಿಗೆ ಹೋಗಿ ಎರಡು ತಿಂಗಳು ಬಿಡಾರ ಹೂಡುತ್ತೇನೆ. ಪರಿಶಿಷ್ಟ ಪಂಗಡಕ್ಕೆ ಸೇರಿಸಿದ ಬಳಿಕವೇ ವಾಪಸು ಕಲಬುರ್ಗಿಗೆ ಬರುತ್ತೇನೆ. ಆದೇಶದ ಪ್ರತಿಯನ್ನು ವಿಠ್ಠಲ ಹೇರೂರ ಅವರ ಸಮಾಧಿ ಮೇಲೆ ಇಟ್ಟು, ಪೂಜೆ ಮಾಡಿದ ಬಳಿಕವೇ ಜನರ ಬಳಿ ಹೋಗುತ್ತೇನೆ’ ಎಂದು ತಿಳಿಸಿದರು.
‘ಮಲ್ಲಿಕಾರ್ಜುನ ಖರ್ಗೆ ಅವರು 50 ವರ್ಷಗಳಿಂದ ಯಾವುದೇ ಅಭಿವೃದ್ಧಿ ಮಾಡಿಲ್ಲ. ಚುನಾವಣೆ ಸಮೀಪ ಬಂದಾಗ ಅವರಿಗೆ ಕೋಲಿ ಸಮಾಜ ನೆನಪಾಗಿದೆ. ಖರ್ಗೆ ಅವರು 50 ವರ್ಷಗಳಲ್ಲಿ ಮಾಡದ ಸಾಧನೆಯನ್ನು ಡಾ.ಉಮೇಶ ಜಾಧವ 5 ವರ್ಷಗಳಲ್ಲಿ ಮಾಡಿ ತೋರಿಸುತ್ತಾರೆ. ಆದ್ದರಿಂದ ಸಮಾಜ ಬಾಂಧವರು ಒಗ್ಗಟ್ಟಾಗಿ ಜಾಧವ ಅವರನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.
ಮುಖಂಡರಾದ ಅವಣ್ಣ ಮ್ಯಾಕೇರಿ, ಶರಣಪ್ಪ ತಳವಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.