ಕಲಬುರ್ಗಿ: ‘ಸಮಾಜದಲ್ಲಿ ಸಾರ್ವತ್ರಿಕ ಶಿಕ್ಷಣ ಇಲ್ಲದ ಕಾಲದಲ್ಲಿ ಮೌಢ್ಯಗಳನ್ನು ಬಿತ್ತಲಾಗಿತ್ತು. ಹೀಗಾಗಿ, ಅನಾದಿ ಕಾಲದಿಂದಲೂ ನಾಗರ ಕಲ್ಲಿಗೆ ಹಾಲೆರೆಯುವ ಸಂಪ್ರದಾಯ ಬೆಳೆದುಬಂದಿದೆ. ಆದರೆ, ಈಗ ಸಮಾಜದಲ್ಲಿ ಸುಶಿಕ್ಷಿತರು ಹೆಚ್ಚಾಗಿದ್ದರೂ ಮೌಢ್ಯ ಆಚರಣೆ ಬಿಡುತ್ತಿಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಕಳವಳ ವ್ಯಕ್ತಪಡಿಸಿದರು.
ನಾಗಪಂಚಮಿ ಅಂಗವಾಗಿ ಕಲಬುರ್ಗಿ ಆರ್ಟ್ ಥಿಯೇಟರ್, ಸಂಸ್ಕಾರ ಪ್ರತಿಷ್ಠಾನ ಹಾಗೂ ನಿಮ್ಮಿಂದ ನಿಮಗೋಸ್ಕರ ಸೇವಾ ಅಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ನಗರದ ಕಣ್ಣಿ ಮಾರುಕಟ್ಟೆ ಹತ್ತಿರದ ಅಲೆಮಾರಿ ಸಮುದಾಯದ ಮಕ್ಕಳಿಗೆ ಹಾಲು ಮತ್ತು ಖರ್ಜೂರ ವಿತರಣೆ ಮಾಡಿ ಅವರು ಮಾತನಾಡಿದರು.
‘ನಮ್ಮಲ್ಲಿ ಇನ್ನೂ ಸಾಕಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಆದರೆ, ಭಕ್ತಿಯ ಹೆಸರಲ್ಲಿ ಅಪಾರ ಪ್ರಮಾಣದ ಹಾಲನ್ನು ರಸ್ತೆಗೆ ಸುರಿಯುವವರೂ ಇದ್ದಾರೆ. ಈ ಹಾಲನ್ನು ಅಪೌಷ್ಟಿಕ ಮಕ್ಕಳಿಗೆ ನೀಡಿ ಅರ್ಥಪೂರ್ಣವಾಗಿ ಪಂಚಮಿ ಆಚರಿಸಬೇಕು. ಇದಕ್ಕಾಗಿ ಇನ್ನಷ್ಟು ಜಾಗೃತಿ ಕಾರ್ಯಕ್ರಮಗಳು ಅಗತ್ಯ’ ಎಂದರು.
ಮುಖ್ಯ ಅಥಿತಿಯಾಗಿದ್ದ ಮಾಧ್ಯಮ ಅಕಾಡೆಮಿ ಸದಸ್ಯ ದೇವಿಂದ್ರಪ್ಪ ಕಾಪಾನೂರ ಮಾತನಾಡಿ, ‘ದೇಶದಲ್ಲಿ ಹಲವು ವರ್ಷಗಳಿಂದ ಮೂಢನಂಬಿಕೆಗಳ ಆಧಾರದ ಮೇಲೆಯೇ ಹಬ್ಬ ಆಚರಿಸಲಾಗುತ್ತಿದೆ. ಇದರಲ್ಲಿ ಬಡಲಾವಣೆ ತರುವುದು ತುರ್ತು ಅಗತ್ಯವಾಗಿದೆ’ ಎಂದರು.
ಮುಖಂಡರಾದ ಬಿ.ವಿ. ಚಕ್ರವರ್ತಿ, ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತಪ್ಪ ಪಾಟೀಲ ಸಣ್ಣೂರ, ಜನವಾದಿ ಮಹಿಳಾ ಸಂಘಟನೆ ಮುಖಂಡರಾದಅಶ್ವಿನಿ ಮದನಕರ್, ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಮೈಲಾರಿ ದೊಡ್ಡಮನಿ, ಕಾರ್ಯದರ್ಶಿ ಸಿದ್ದಲಿಂಗ ಪಾಳಾ, ನಿಮ್ಮಿಂದ ನಿಮಗೋಸ್ಕರ ಸೇವಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸಾಯಿಬಣ್ಣ ದೊಡ್ಡಮನಿ, ವಿಜ್ಞಾನ ಶಿಕ್ಷಕರಾದ ರೂಪೇಶಕುಮಾರ ಕುರೆ, ಪ್ರಕಾಶ ಬಬಲಾದಕರ್, ಜೈಕುಮಾರ ನೂಲಕರ್ ಹಾಗೂ ಲಕ್ಷ್ಮಣ ಪಾಳ ಇದ್ದರು.
ಕಾರ್ಯಕ್ರಮ ಆಯೋಜಕ ಸುನೀಲ ಮಾರುತಿ ಮಾನಪಡೆ ನಿರೂಪಣೆಗೊಳಿಸಿದರು. ವಿಠಲ ಚಿಕಣಿ ವಂದನಾರ್ಪಣೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.