ಚಿಂಚೋಳಿ: ಕೇಂದ್ರ ಸರ್ಕಾರದ ಇಂಧನ ಮತ್ತು ಅಗತ್ಯ ವಸ್ತುಗಳ ದರ ಏರಿಕೆಯನ್ನು ಖಂಡಿಸಿ ಜೆಡಿಎಸ್ ತಾಲ್ಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಪಟ್ಟಣದ ಕನಕದಾಸ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡ ಸಂಜೀವನ ಯಾಕಾಪುರ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳ ಚುನಾವಣೆಯ ಬಳಿಕ ಕೇಂದ್ರ ಸರ್ಕಾರ ಇಂಧನ ದರ ಹೆಚ್ಚಿಸಿದ್ದು ಜನವಿರೋಧಿ ನೀತಿಯಾಗಿದೆ. ಈ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ. ದರ ಏರಿಕೆಯಿಂದ ಜನರ ಜೀವನ ದುಸ್ತರಗೊಂಡಿದೆ ಎಂದು ಆರೋಪಿಸಿದರು.
ಸರ್ಕಾರ ಪೆಟ್ರೋಲ್, ಡೀಸೆಲ್ ನಂತಹ ಉತ್ಪನ್ನಗಳ ಮೇಲಿನ ಸೆಸ್ ಅನ್ನು ಶೇ 50ರಷ್ಟು ಕಡಿತಗೊಳಿಸಬೇಕು. ಜನರಿಗೆ ಹೊರೆ ಆಗದಂತೆ ಇಂಧನ ದರ ನಿಗದಿ ಮಾಡಬೇಕು. ಅಗತ್ಯ ವಸ್ತುಗಳ ದರ ಹೆಚ್ಚಳಕ್ಕೆ ಕಡಿವಾಣ ಹಾಕಬೇಕು. ಅಡುಗೆ ಎಣ್ಣೆ ಬೆಲೆ ಇಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಕಲ್ಯಾಣ ಕರ್ನಾಟದ ಎಲ್ಲಾ ಜಿಲ್ಲೆಗಳ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ ಮಾಡಿ ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರ ವರೆಗೆ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜೆಡಿಎಸ್ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ, ಕಾಳಗಿ ತಾಲ್ಲೂಕು ಘಟಕದ ಅಧ್ಯಕ್ಷ ಗೌರಿಶಂಕರ ಸೂರವಾರ, ಮುಖಂಡರಾದ ಸಯ್ಯದ್ ನಿಯಾಜ್ ಅಲಿ, ಹಣಮಂತ ಪೂಜಾರಿ, ಶರಣಪ್ಪ ಮಾಳಗೆ, ಸಿದ್ದು ಬುಬಲಿ, ಶಂಕರ ಕೊಟಗಾ, ರಾಧಾಕೃಷ್ಣ, ರಾಹುಲ್ ಯಾಕಾಪುರ, ಖತಲಪ್ಪ, ಮಲ್ಲಿಕಾರ್ಜುನ ಅರುಣ, ಪವನ, ಸುಭಾಷ,ಚಿನ್ನಯ್ಯ, ಪ್ರಶಾಂತ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.