ಕಲಬುರ್ಗಿ: ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ನಿಸ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಎಐಎಂಎಸ್ಎಸ್ (ಅಖಿಲ ಭಾರತ ಸಮಿತಿ) ಕರೆಯ ಮೇರೆಗೆ ‘ಅಖಿಲ ಭಾರತ ಪ್ರತಿಭಟನಾ ದಿನ‘ದ ಅಂಗವಾಗಿ ಆಯೋಜಿಸಿದ ಪ್ರತಿಭಟನೆಯಲ್ಲಿ , ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದರು.
‘ಪರಿಶಿಷ್ಟ ಸಮುದಾಯಕ್ಕೆ ಸೇರಿದ ಯುವತಿ ಮೇಲೆ ಠಾಕೂರ್ ಸಮುದಾಯದ ನಾಲ್ವರು ದುರುಳರು ಅತ್ಯಾಚಾರ ಮಾಡಿ, ನಾಲಿಗೆ ಕತ್ತರಿಸಿ, ಮೂಳೆ ಮುರಿದು ಕೊಲೆ ಮಾಡಿದ್ದಾರೆ. ಇಂತಹ ಭೀಭತ್ಸ ಘಟನೆ ಇಡೀ ದೇಶವನ್ನೇ ನಡುಗಿಸಿದೆ. ಆದರೆ, ಉತ್ತರ ಪ್ರದೇಶದ ಸರ್ಕಾರವಾಗಲೀ, ಕೇಂದ್ರ ಸರ್ಕಾರವಾಗಲೀ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪ್ರಕರಣವನ್ನು ಮುಚ್ಚಿ ಹಾಕುವ ಸಲುವಾಗಿ ಯುವತಿ ದೇಹವನ್ನು ತರಾತಿರಿಯಲ್ಲಿ ಸುಟ್ಟಿದ್ದಾರೆ. ಸಂತ್ರಸ್ತೆಯ ಕುಟುಂಬದವರಿಗೆ ಮಾಧ್ಯಮದ ಮುಂದೆ ಹೇಳಿಕೆ ನೀಡಲೂ ಬಿಡುತ್ತಿಲ್ಲ. ಇದೆಲ್ಲವನ್ನೂ ನೋಡಿದರೆ ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆದಿದ್ದು ಸ್ಪಷ್ಟವಾಗುತ್ತದೆ’ ಎಂದೂ ದೂರಿದರು.
‘ಘಟನೆಯ ನಿಸ್ಪಕ್ಷಪಾತ ವಿಚಾರಣೆಗಾಗಿ ಸುಪ್ರೀಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ವಿಚಾರಣೆ ಖಾತರಿಪಡಿಸಬೇಕು. ಅತ್ಯಾಚಾರ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಸಂತ್ರಸ್ತೆಯ ಮರಣದ ಮುನ್ನ ಹಾಗೂ ನಂತರ ಅಪರಾಧಿಗಳೊಂದಿಗೆ ಶಾಮೀಲಾಗಿರುವ ಪೊಲೀಸ್ ಅಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದೂ ಆಗ್ರಹಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಗುಂಡಮ್ಮ ಮಡಿವಾಳ, ಕಾರ್ಯದರ್ಶಿ ಗೌರಮ್ಮ ಸಿ.ಕೆ. ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.