ಕಲಬುರ್ಗಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಜನ್ಮಭೂಮಿ ಬೆಳಗಾವಿಯ ಪೀರನವಾಡಿ ವೃತ್ತದಲ್ಲಿ ರಾಯಣ್ಣ ಪ್ರತಿಮೆ ಸ್ಥಾಪಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬೆಳಗಾವಿ ಜಿಲ್ಲಾಡಳಿತ ಅನುಮತಿ ನಿರಾಕರಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
‘ರಾಯಣ್ಣನ ಜನ್ಮಭೂಮಿಯಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ಅಧಿಕಾರಿಗಳು ಇಲ್ಲಸಲ್ಲದ ನೆಪ ಹೇಳಿ ಅನುಮತಿ ನಿರಾಕರಿಸುತ್ತಿರುವುದು ನಾಚಿಕೆಗೇಡು. ಸಂಭಾಜಿ, ಶಿವಾಜಿ, ತಾನಾಜಿಯ ಪ್ರತಿಮೆ ಸ್ಥಾಪನೆ ಸಮಯದಲ್ಲಿ ತುಟಿ ಬಿಚ್ಚದ ಅಧಿಕಾರಿಗಳು ರಾಯಣ್ಣ, ಚೆನ್ನಮ್ಮ, ಅಮಟೂರ ಬಾಳಪ್ಪ ಸೇರಿದಂತೆ ಹಲವರು ನಾಡ ಸೇನಾನಿಗಳ ಪ್ರತಿಮೆ ಸ್ಥಾಪನೆಗೆ ಮುಂದಾದಾಗ ಸುರಕ್ಷತೆ, ಕಾನೂನು, ಅನುಮತಿ, ಠರಾವು, ಭದ್ರತೆ ಸೇರಿದಂತೆ ಹಲವು ನೆಪ ನೀಡಿ ತಡೆ ಹಿಡಿಯುವ ಕೆಲಸ ಮಾಡಲಾಗುತ್ತಿದೆ’ ಎಂದು ಸಂಘಟನೆಯ ಕಾರ್ಯಕರ್ತರು ಆರೋಪಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ದೇಗಾಂವ, ಜಿಲ್ಲಾ ಉಪಾಧ್ಯಕ್ಷ ಪ್ರಶಾಂತ ಮಠಪತಿ, ಕಾರ್ಯಾಧ್ಯಕ್ಷ ಸಂತೋಷ ಪಾಟೀಲ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಪಾಟೀಲ, ಶ್ರೀಶೈಲ ಸಾಗರೆ, ಮಾಂತೇಶ ಹರವಾಳ, ಕವಿತಾ ದೇಗಾಂವ, ರಾಜೇಶ್ವರಿ ಉಪ್ಪಾರ, ಸತೀಶ ಪಾಟೀಲ, ಧರ್ಮರಾಜ ಶಹಾಪುರ, ದಿಲೀಪ ಕಿರಸಾವಳಗಿ, ಋಷಿ ಬೆನಕನಳ್ಳಿ, ಮಹಾಂತೇಶ ಕೋಣೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.