ಚಿಂಚೋಳಿ: ‘ಕೃಷಿ, ಕೃಷಿಕರು ಮತ್ತು ಕೃಷಿ ಮಾರುಕಟ್ಟೆಗೆ ಮಾರಕವಾದ ಮೂರು ಕಾಯ್ದೆಗಳನ್ನು ಹಿಂಪಡೆಯಬೇಕು ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದನ್ನು ಕೈಬಿಡಬೇಕು’ ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮುಖಂಡ ಸುಭಾಷ ರಾಠೋಡ್ ಮಾತನಾಡಿ, ‘ದೇಶದ ರೈತರು ಮತ್ತು ಜನಸಾಮಾನ್ಯರ ಬದುಕಿನ ಮೇಲೆ ಪ್ರಹಾರ ನಡೆಸಿರುವ ಕೇಂದ್ರ ಸರ್ಕಾರದ ದೋರಣೆ ಖಂಡನೀಯ. ರೈತರ ಬದುಕು ಬಲಹೀನಗೊಳಿಸುವ ಉದ್ದೇಶದಿಂದ ಜಾರಿ ಮಾಡಲಾದ ಕಾಯ್ದೆಗಳನ್ನು ಹಿಂಪಡೆಯುವಂತೆ ರೈತರು ಹೋರಾಟ ನಡೆಸಿದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಕೇಂದ್ರ ಸರ್ಕಾರವು ಮೊಂಡುತನ ಪ್ರದರ್ಶಿಸುತ್ತಿದೆ’ ಎಂದು ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಮಾತನಾಡಿ, ‘ಲೋಕಸಭಾ ಕ್ಷೇತ್ರಕ್ಕೆ ಸಂಸದ ಡಾ. ಉಮೇಶ ಜಾಧವ ಅವರು ನೀಡಿರುವ ಕೊಡುಗೆ ಏನು? ಅವರು ಮನವಿಪತ್ರ ಸಲ್ಲಿಕೆಗೆ ಮಾತ್ರ ಸೀಮಿತವಾಗಿದ್ದಾರೆ’ ಎಂದರು.
ಪಕ್ಷದ ಹಿರಿಯ ಮುಖಂಡ ಭೀಮರಾವ್ ಟಿಟಿ, ರೇವಣಸಿದ್ದಪ್ಪ ಸಾತನೂರ, ಮಾಮಪಣ್ಣ ಗಂಜಗಿರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಜಮಾದಾರ, ಬಸವರಾಜ ಮಾಲಿ, ಜಗನ್ನಾಥ ಈದಲಾಯಿ, ಸಯ್ಯದ್ ಶಬ್ಬೀರ್ ಅಹಮದ್, ನಾರಾಯಣ ಭರತನೂರ, ಚಿತ್ರಶೇಖರ ಪಾಟೀಲ, ಗೋಪಾಲರಾವ್ ಕಟ್ಟಿಮನಿ,ಮಹಿಮೂದ ಪಟೇಲ್ ಸಾಸರಗಾಂವ್, ಶರಣು ಪಾಟೀಲ ಮೋತಕಪಳ್ಳಿ, ಮಧುಸೂದನರೆಡ್ಡಿ ಪಾಟೀಲ, ಆರ್. ಗಣಪತರಾವ್, ಅಮರ ಲೊಡ್ಡನೋರ್, ಸಂತೋಷ ಗುತ್ತೇದಾರ, ರವುಫ್ ಮಿರಿಯಾಣ, ರಾಮಶೆಟ್ಟಿ ಪವಾರ, ನಾಗೇಶ ಗುಣಾಜಿ, ಜನಾರ್ದನ ಪಾಟೀಲ, ನರಶಿಮಲು ಕುಂಬಾರ, ನರಶಿಮ್ಲು ಸವಾರಿ ಹಾಗೂ ಬಸವರಾಜ ಕೆರೋಳ್ಳಿ, ಸಿದ್ಧರಾಮೇಶ ನಿಷ್ಠಿ, ರೇವಣಸಿದ್ದ ಪೂಜಾರಿ ಇದ್ದರು.
ಇದಕ್ಕೂ ಮುನ್ನ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಚಂದಾಪುರದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ತಹಶೀಲ್ದಾರ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.