ಕಲಬುರ್ಗಿ: ‘ನಗರದ ಜೇವರ್ಗಿ ರಸ್ತೆಯ ಸಾರಡಾ ಬಡವಾಣೆಯಲ್ಲಿರುವ ಉದ್ಯಾನದ ಕಾಂಪೌಂಡ್ ಅನ್ನು ಕೆಡವಿದ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಆಗ್ರಹಿಸಿ, ಉದ್ಯಾನ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಧರಣಿ ನಡೆಸಲಾಯಿತು.
‘ಈ ಸ್ಥಳವು ಮಹಾನಗರ ಪಾಲಿಕೆಗೆ ಸೇರುತ್ತದೆ. ಪಾಲಿಕೆ ಅನುದಾನದಲ್ಲೇ ಉದ್ಯಾನಕ್ಕೆ ಕಾಂಪೌಂಡ್ ನಿರ್ಮಿಸಲಾಗಿದೆ. ಆದರೆ, ಯಾರದೋ ಒತ್ತಡಕ್ಕೆ ಮಣಿದು ಪಾಲಿಕೆ ಅಧಿಕಾರಿಗಳೇ ಈಚೆಗೆ ಕಾಂಪೌಂಡ್ ಕೆಡವಿದ್ದಾರೆ. ಇನ್ನೊಂದೆಡ, ‘ಕುಡಾ’ ಅಧಿಕಾರಿಗಳು ಕೂಡ ಸ್ಥಳದ ನಕಾಶೆ ತಿದ್ದುಪಡಿ ಮಾಡಿರುವ ನಿರ್ಣಯ ಕೈಗೊಂಡಿದ್ದಾರೆ. ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಸರ್ಕಾರಿ ಆಸ್ತಿಯನ್ನು ರಕ್ಷಣೆ ಮಾಡಬೇಕು’ ಎಂದು ಆಗ್ರಹಿಸಿದರು.
‘ಉದ್ಯಾನದಲ್ಲಿ 20 ವರ್ಷಗಳ ಹಿಂದೆ ನಿರ್ಮಿಸಿರುವ ಗಣೇಶ ಮಂದಿರವನ್ನು ಕೆಡವಲು ಇಲ್ಲದ ಕುತಂತ್ರ ನಡೆಸುತ್ತಿದ್ದಾರೆ. ಬಡಾವಣೆಯ ನಕಾಶೆಯನ್ನು ತಿದ್ದುಪಡಿ ಮಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಡಾವಣೆ ಮಾಲೀಕರು ಮೂರು ನಿವೇಶನಗಳನ್ನು ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ನಕಲು ದಾಖಲೆಗಳ ಕುರಿತು ಹೈಕೋರ್ಟ್ 2005ರಲ್ಲಿ ನೀಡಿರುವ ತೀರ್ಪಿನಲ್ಲಿಯೇ ಉಲ್ಲೇಖಿಸಿದೆ. ಆದರೂ ಅಧಿಕಾರಿಗಳು ಭೂಗಳ್ಳರೊಂದಿಗೆ ಶಾಮೀಲಾಗಿದ್ದಾರೆ’ ಎಂದು ಮನವಿಯಲ್ಲಿ ದೂರಿದ್ದಾರೆ.
ಬಡಾವಣೆ ನಿವಾಸಿಗಳಾದ ಶಂಕರ ಕಟ್ಟಿಸಂಗಾವಿ, ಭೀಮಾಶಂಕರ ಮಾಡಿಯಾಳ, ಡಾ.ಮಹೇಶಕುಮಾರ ರಾಠೋಡ, ಹಣಮಂತ ಅಟ್ಟೂರ, ದೀಪಕ ಗಾಲಾ, ಪ್ರಭುದೇವ ಯಳಸಂಗಿ, ಆರ್.ಜಿ.ಗುಂಜಟ್ಟಿ, ವಿಜಯಕುಮಾರ ಸಾತನೂರಕರ್, ಮಲ್ಲಿಕಾರ್ಜುನ ಗಡಗಿ, ಎಸ್.ಬಿ.ಮುನೋಳಿ, ಶರಣಪ್ಪ ಸಿಂಧೆ, ಡಾ.ಪಿ.ಸಂಪತ್ತಕುಮಾರ, ಸೂರ್ಯಕಾಂತ, ರಾವ್ ಬಹಾದ್ದೂರ, ಓಂಪ್ರಕಾಶ, ಶಿವಲಿಂಗಮ್ಮ ಲೆಂಗಟಿಕರ್, ಜನಾಬಾಯಿ ವಗ್ಗೆ, ಬಸವರಾಜ ಟೆಂಗಳಿ, ಪದ್ಮಾವತಿ ಮಾಲಿಪಾಟೀಲ, ಚಂದ್ರಶಾ ಹೊನಗುಂಟಿ, ಶಿವಮ್ಮ ವಾಡೇಕರ್, ಖಂಡಪ್ಪ ಗುಂಜೆಟ್ಟಿ, ಶರಣಬಸಪ್ಪ ಗಣಜಲಖೇಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.