ಸುರಪುರ: ‘ಬಂಗಾರ ಅಡವಿಟ್ಟು ಸಾಲ ಪಡೆದ ಬಡವರ ಮೇಲೆ ಮಣಪುರಂ ಗೋಲ್ಡ್ ಫೈನಾನ್ಸ್ ಶಾಖಾಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ಆರೋಪಿಸಿ ದಲಿತ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಒಕ್ಕೂಟದ ಮುಖಂಡರು ಮಂಗಳವಾರ ನಗರದ ಶಾಖಾ ಕಚೇರಿ ಬಳಿ ಪ್ರತಿಭಟಿಸಿದರು.
ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ‘ಕಾಯ್ದೆ ಪ್ರಕಾರ ಸಾಲ ಮರುಪಾವತಿಸಲು ಮೌಖಿಕವಾಗಿ ತಿಳಿಸಬೇಕು ಮನವೊಲಿಸುವ ಕೆಲಸ ಮಾಡಬೇಕು. ತಿಳಿವಳಿಕೆ 3 ನೋಟಿಸ್ ನೀಡಬೇಕು. ಸ್ಪಂದಿಸದಿದ್ದಲ್ಲಿ ಪತ್ರಿಕೆ ಪ್ರಕಟಣೆ ಮೂಲಕ ಅಂತಿಮ ನೋಟಿಸ್ ಕಳುಹಿಸಿ ನಂತರ ಅಡವಿಟ್ಟ ಸಾಮಗ್ರಿ ಮುಟ್ಟುಗೋಲು ಮಾಡಿಕೊಳ್ಳಬಹುದು. ಬಹಿರಂಗ ಹರಾಜು ಸಂದರ್ಭದಲ್ಲಿ ಸಾಲಗಾರ ಮರುಪಾವತಿಸಲು ಬಂದರೆ ಅವಕಾಶ ನೀಡಬೇಕು ಎಂಬ ನಿಯಮವಿದೆ. ಶಾಖಾ ವ್ಯವಸ್ಥಾಪಕರು ಇದ್ಯಾವುದನ್ನು ಮಾಡದೆ ಏಕಪಕ್ಷಿಯ ನಿರ್ಧಾರ ಕೈಗೊಂಡಿದ್ದು ಹರಾಜು ಪ್ರಕ್ರಿಯೆ ಮುಂದಾಗಿದ್ದಾರೆ’ ಎಂದು ದೂರಿದರು.
‘ಬಹಿರಂಗ ಹರಾಜು ಪ್ರಕ್ರಿಯೆ ತಡೆಹಿಡಿದು ಮರುಪಾವತಿಗೆ ಕಾಲಾವಕಾಶ ನೀಡಬೇಕು, ಬ್ಯಾಂಕ್ ನಿಯಮ ಉಲ್ಲಂಘಿಸಿ ಬಡವರಿಗೆ ಕಿರುಕುಳ ನೀಡುತ್ತಿರುವ ಶಾಖಾ ವ್ಯವಸ್ಥಾಪಕರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮತ್ತು ಪೊಲೀಸ್ ವರಿಷ್ಠಾಧಿಕಾರಿಗೆ ಬರೆದ ಮನವಿಯನ್ನು ಬ್ಯಾಂಕ್ ಅಧಿಕಾರಿಗೆ ಸಲ್ಲಿಸಿದರು. ಮುಖಂಡರಾದ ನಾಗಣ್ಣ ಕಲ್ಲದೇವನಹಳ್ಳಿ, ಭೀಮರಾಯ ಸಿಂಧಗೇರಿ, ರಾಜು ದರಬಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.