ಕಲಬುರ್ಗಿ: ‘ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೊಬ್ಬರು ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಲು ಶಿಫಾರಸು ಮಾಡಬೇಕು’ ಎಂದು ಆಗ್ರಹಿಸಿ ವಿಶ್ವವಿದ್ಯಾಲಯದ ಶಿಕ್ಷಕ ಹಾಗೂ ಶಿಕ್ಷಕೇತರ ನೌಕರರ ಸಂಘಟನೆಗಳ ವೇದಿಕೆಯಿಂದ ಸೋಮವಾರ ಕ್ಯಾಂಪಸ್ನಲ್ಲಿ ಪ್ರತಿಭಟನೆ ಮಾಡಲಾಯಿತು.
ಕುಲಸಚಿವ ಶರಣಬಸಪ್ಪ ಕೊಟ್ಟೆಪ್ಪಗೋಳ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ‘ಸಿಂಡಿಕೇಟ್ ಸದಸ್ಯರೊಬ್ಬರು ಸಿಬ್ಬಂದಿ ಮೇಲೆ ವಿನಾಕಾರಣ ಪೊಲೀಸ್ ದೂರು ನೀಡಿದ್ದಾರೆ. ಸಿಂಡಿಕೇಟ್ನಲ್ಲಿ ಚರ್ಚಿಸದೇ ನೇರವಾಗಿ ಪ್ರಕರಣ ದಾಖಲಿಸಿರುವುದು ವಿಶಾದನೀಯ. ಈ ರೀತಿ ಸಿಬ್ಬಂದಿಗೆ ನೀಡುತ್ತಿರುವ ಕಿರುಕುಳ ನಿರಂತರವಾಗಿ ಮುಂದುವರಿದಿದೆ. ಪ್ರಸ್ತುತ ಪೊಲೀಸ್ ಪ್ರಕರಣದಾಖಲಿಸುವ ಮೂಲಕ ಸ್ವತಃ ಸಿಂಡಿಕೇಟ್ ಸದಸ್ಯರೇ ವಿಶ್ವವಿದ್ಯಾಲಯದ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ’ ಎಂದೂ ಮನವಿಯಲ್ಲಿ
ದೂರಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ, ‘ಈ ಬಗ್ಗೆ ಕುಲಪತಿ ಅವರೊಂದಿಗೆ ಚರ್ಚಿಸಿ ಕ್ರಮವಹಿಸುವುದಾಗಿ’ ತಿಳಿಸಿದರು.
ಸಂಘಟನೆ ಮುಖಂಡರಾದ ಬಿ.ಎಂ. ರುದ್ರವಾಡಿ, ಪ್ರೊ.ಎನ್.ಬಿ. ನಡುವಿನಮನಿ, ಪ್ರೊ.ಕೆ.ಎಸ್. ಮಾಲಿಪಾಟೀಲ, ಡಾ.ಖೇಮಣ್ಣ ಅಲ್ದಿ, ಪ್ರೊ.ಕೆ. ಶ್ರೀರಾಮುಲು, ಪ್ರೊ.ಕೆ. ಸಿದ್ದಪ್ಪ, ಪ್ರೊ.ಲಲಿತಾ ಜೆ., ಪ್ರಕಾಶ ಹದನೂರಕರ, ಬಸವರಾಜ ಚೌರಿ, ಬಸಣ್ಣ ಉದನೂರ, ವೇದಕುಮಾರ ಪ್ರಜಾಪತಿ ಹಾಗೂ ಶಿಕ್ಷಕ ಹಾಗೂ ಶಿಕ್ಷಕೇತರಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.