ಕಲಬುರ್ಗಿ: ಇಲ್ಲಿನ ಹನುಮಾನ್ ನಗರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡುವಂತೆ ಆಗ್ರಹಿಸಿ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ನೇತೃತ್ವದಲ್ಲಿ ಬಡಾವಣೆಯ ಮಹಿಳೆಯರು ಲೋಕಪಾಯೋಗಿ ಇಲಾಖೆಯ ಎದುರು ಶನಿವಾರ ಪ್ರತಿಭಟನೆ ಮಾಡಿದರು.
ಹನುಮಾನ್ ನಗರದಲ್ಲಿ ಸುಮಾರು 50 ವರ್ಷಗಳಿಂದ 300ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ. ಅಲ್ಲಿ ವಾಸಿಸುವ ಬಹುತೇಕ ಕುಟುಂಬಗಳು ಎರಡೊತ್ತಿನ ಊಟಕ್ಕಾಗಿ ದಿನಗೂಲಿ ಹಾಗೂ ಮನೆಗೆಲಸ ಮಾಡುತ್ತ ಕಷ್ಟದ ಜೀವನ ಸಾಗಿಸುತ್ತಿವೆ. ಇಂಥದರಲ್ಲಿ ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಡಾವಣೆಯಲ್ಲಿ ಕುಡಿಯುವ ನೀರಿನ ತೀರ್ವ ಅಭಾವ ಉಂಟಾಗಿದೆ. ಪ್ರತಿದಿನವೂ ರೈಲ್ವೆ ನಿಲ್ದಾಣಕ್ಕೆ ಬಂದು ಕುಡಿಯುವ ನೀರು ಹೊತ್ತುಕೊಂಡು ಹೋಗಬೇಕಾಗಿದೆ. ಹಲವು ಬಾರಿ ರೈಲ್ವೆ ಇಲಾಖೆಯ ಪೋಲಿಸರಿಂದ ನೀರು ತರುವಾಗ ಹೊಡೆಯುತ್ತಾರೆ’ ಎಂದು ದೂರಿದರು.
‘ಎಸ್ಯುಸಿಐ(ಸಿ) ಪಕ್ಷದ ನೇತೃತ್ವದಲ್ಲಿ ಹಲವು ಬಾರಿ ಹೋರಾಟ ಮಾಡಿದ ನಂತರ 2018ರಲ್ಲಿ ಸಾಲಿನಲ್ಲಿ ನೀರು ಸರಬರಾಜು ಕಾಮಗಾರಿಗೆ ಹಣ ಬಿಡುಗಡೆ ಮಾಡಲಾಯಿತು. ಅದಾಗಿ 2 ವರ್ಷಗಳು ಕಳೆದರೂ ಕಾಮಗಾರಿ ಪ್ರಾರಂಭಿಸಲಾಗಿಲ್ಲ. ಲೋಕೊಪಯೋಗಿ ಇಲಾಖೆ ಹಾಗೂ ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳು ಈ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದೂ ದೂರಿದರು.
ಎಸ್ಯುಸಿಐ(ಕಮ್ಯುನಿಸ್ಟ್) ಪಕ್ಷದ ಸ್ಥಳೀಯ ಸಮಿತಿ ಸದಸ್ಯರಾದ ಅಭಯಾ ದಿವಾಕರ್ ಹಾಗೂ ಭೀಮು ಆಂದೋಲಾ, ಗೋದಾವರಿ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.