ADVERTISEMENT

ಪುಟ್ಟರಾಜ ಗವಾಯಿ ಜಯಂತಿ ಸರ್ಕಾರ ಆಚರಿಸಲಿ: ಕಲ್ಲಯ್ಯಜ್ಜ

ಚಿತ್ತಾಪುರ: ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 5:08 IST
Last Updated 22 ಏಪ್ರಿಲ್ 2022, 5:08 IST
ಚಿತ್ತಾಪುರ ಪಟ್ಟಣದಲ್ಲಿ ಈಚೆಗೆ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿದ್ದ ಸಂಗೀತೋತ್ಸವ ಕಾರ್ಯಕ್ರಮವನ್ನು ಚನ್ನವೀರಯ್ಯ ಸ್ವಾಮಿ ಹಿರೇಮಠ ಅವರು ಉದ್ಘಾಟಿಸಿದರು
ಚಿತ್ತಾಪುರ ಪಟ್ಟಣದಲ್ಲಿ ಈಚೆಗೆ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿದ್ದ ಸಂಗೀತೋತ್ಸವ ಕಾರ್ಯಕ್ರಮವನ್ನು ಚನ್ನವೀರಯ್ಯ ಸ್ವಾಮಿ ಹಿರೇಮಠ ಅವರು ಉದ್ಘಾಟಿಸಿದರು   

ಚಿತ್ತಾಪುರ: ‘ಗದುಗಿನ ವೀರೇಶ್ವರ ಪುಣ್ಯಾಶ್ರಮದ ಮೂಲಕ ಅಸಹಾಯಕ ಮಕ್ಕಳ ಸೇವೆ ಮಾಡಿದ ಪುಟ್ಟರಾಜ ಗವಾಯಿಗಳ ಜಯಂತಿಯನ್ನು ಸರ್ಕಾರವೇ ಆಚರಣೆ ಮಾಡಬೇಕು’ ಎಂದು ಪುಣ್ಯಾಶ್ರಮದ ಕಲ್ಲಯ್ಯ ಅಜ್ಜ ಒತ್ತಾಯಿಸಿದರು.

ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಈಚೆಗೆ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿದ್ದ ಗಾನಯೋಗಿ ಸಂಗೀತೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಗದುಗಿನಲ್ಲಿ ವೀರೇಶ್ವರ ಪುಣ್ಯಾಶ್ರಮ ಸ್ಥಾಪನೆ ಮಾಡಿದ ಹಾನಗಲ್ಲ ಪಂಚಾಕ್ಷರಿ ಗವಾಯಿಗಳಿಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಪ್ರಶಸ್ತಿ ನೀಡಬೇಕು. ಸಂಗೀತ ಮತ್ತು ಸಾಹಿತ್ಯಕ್ಕೆ ಜಾತಿಯಿಲ್ಲ. ಪ್ರತಿಯೊಬ್ಬರೂ ಜಾತಿಯತೆಯನ್ನು ಮರೆತು ಸಂಗೀತ ಕಲೆಯನ್ನು ಉಳಿಸಿ
ಬೆಳೆಸಲು ಮುಂದಾಗಬೇಕು. ಸಂಗೀತಗಾರರಿಂದ ಸಂಗೀತದ ಆನಂದ ಪಡೆಯುವ ಜನಪ್ರತಿನಿಧಿಗಳು, ಅಧಿಕಾರಿಗಳು ಸಂಗೀತ ಕಲೆಗಾರರಿಗೆ ಕೆಲಸ ಕೊಡುವ ಯೋಚನೆಯೆ ಮಾಡುವುದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಚೆನ್ನವೀರಯ್ಯ ಸ್ವಾಮಿ ಹಿರೇಮಠ, ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ರಂಗಭೂಮಿ ಕಲಾವಿದ ಶಿವಣ್ಣ ಹಿಟ್ಟಿನ್, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ್ ಮಾತನಾಡಿದರು.

ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಚಾರ್ಯ ಆಶೀರ್ವಚನ ನುಡಿ ಹೇಳಿದರು. ಶ್ವೇತಾ ಪಾಟೀಲ ಅಧ್ಯಕ್ಷತೆ
ವಹಿಸಿದ್ದರು. ರೇವಣಸಿದ್ದಯ್ಯ ಸ್ವಾಮಿ, ಪುರಸಭೆ ಸದಸ್ಯ ಶಾಮ್ ಮೇಧಾ, ರೇವಣಸಿದ್ದಪ್ಪ ರೋಣದ, ಗುರುಲಿಂಗಯ್ಯ ಸ್ವಾಮಿ, ಚಂದ್ರಶೇಖರ ಉಟಗೂರ, ರಾಜಶೇಖರ ಬಳ್ಳಾ, ಶೃತಿ ತಾವರೆ, ಸಿದ್ದಲಿಂಗ ಸ್ಥಾವರಮಠ, ಸೂರ್ಯಕಾಂತ ಹಂಗನಹಳ್ಳಿ, ಗುರಣ್ಣ ಬೊಮ್ಮನಳ್ಳಿ ಇದ್ದರು.

ಇದೇ ಸಂದರ್ಭದಲ್ಲಿ ಡಾ.ಶಿವಕುಮಾರ ಸ್ವಾಮಿ ಸಿದ್ದಗಂಗಾ ಸಾಹಿತ್ಯ ವೇದಿಕೆ ಟ್ರಸ್ಟ್ ಅಧ್ಯಕ್ಷ ರೇವಣಸಿದ್ದಪ್ಪ ರೋಣದ ಹಾಗೂ ರಂಗಭೂಮಿ ಕಲಾವಿದ ಶಿವಣ್ಣ ಹಿಟ್ಟಿನ್ ಅವರ ಕುಟುಂಬದಿಂದ ಕಲಯ್ಯ ಅಜ್ಜನವರಿಗೆ ಪ್ರತ್ಯೇಕವಾಗಿ ತುಲಾಭಾರ ಮಾಡಲಾಯಿತು.
ಸಂಗಮೇಶ ರೋಣದ ಸ್ವಾಗತಿಸಿದರು. ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.