ADVERTISEMENT

ಖವ್ವಾಲಿ ಜನಪ್ರಿಯ ಸಂಗೀತ ಪ್ರಕಾರ

ಅಂತರ ವಿಶ್ವವಿದ್ಯಾಲಯಗಳ ಖವ್ವಾಲಿ ಸ್ಪರ್ಧೆ ಉದ್ಘಾಟನೆ: ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 4:46 IST
Last Updated 19 ಮಾರ್ಚ್ 2024, 4:46 IST
ಕಲಬುರಗಿ ನಗರದ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ 6ನೇ ಅಂತರ ವಿಶ್ವವಿದ್ಯಾಲಯಗಳ ಖವ್ವಾಲಿ ಸ್ಪರ್ಧೆಯನ್ನು ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಉದ್ಘಾಟಿಸಿದರು
ಕಲಬುರಗಿ ನಗರದ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ 6ನೇ ಅಂತರ ವಿಶ್ವವಿದ್ಯಾಲಯಗಳ ಖವ್ವಾಲಿ ಸ್ಪರ್ಧೆಯನ್ನು ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಉದ್ಘಾಟಿಸಿದರು   

ಕಲಬುರಗಿ: ‘ಸಂಗೀತ ಮತ್ತು ಮಾತಿನ ಸಮಾಗಮ ಕಾವ್ಯವೇ ಖವ್ವಾಲಿ’ ಎಂದು ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಅಭಿಪ್ರಾಯಪಟ್ಟರು.

ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನವದೆಹಲಿಯ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಸಹಯೋಗದಲ್ಲಿ ನಡೆಯುತ್ತಿರುವ 6ನೇ ಅಂತರ ವಿಶ್ವವಿದ್ಯಾಲಯಗಳ ರಾಷ್ಟ್ರೀಯ ಖವ್ವಾಲಿ ಸ್ಪರ್ಧೆಯ (ಸಾಜ್ -ಈ -ಹಿಂದ್) ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಗೀತ ಪ್ರಕಾರಗಳಲ್ಲಿ ಸೂಫಿ ಕಾವ್ಯ ಖವ್ವಾಲಿ ಪ್ರಸಿದ್ಧಿ ಪಡೆದಿದೆ. ಖವ್ವಾಲಿಯು ಪ್ರಧಾನವಾಗಿ ಪ್ರೀತಿ, ಭಕ್ತಿ ಮತ್ತು ಹಂಬಲವನ್ನು ಒಳಗೊಂಡಿದೆ. ಸೂಫಿ ಸಂತ ಖಾಜಾ ಬಂದಾನವಾಜರು ಖವ್ವಾಲಿಯ ಮೂಲಕ ಪ್ರೇಕ್ಷರನ್ನು ಭಾವಪರವಶಗೊಳಿಸುತ್ತಿದ್ದರು ಎಂದು ಹೇಳಿದರು.

ADVERTISEMENT

ಪ್ರಸಿದ್ಧ ಸೂಫಿ ಪಂಥದ ಸ್ಥಾಪಕ ಮೊಯಿನುದ್ದೀನ್ ಚಿಸ್ತಿ ಖವ್ವಾಲಿ ಮೂಲಕ ಜನತೆಗೆ ಒಳ್ಳೆಯ ಸಂದೇಶ ಸಾರುತ್ತಿದ್ದರು. ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ ಎಂದರು.

ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಲಿ ರಜಾ ಮೂಸ್ವಿ ಮಾತನಾಡಿ, ‘ಖವ್ವಾಲಿ ಪ್ರಕಾರದ ಸಾಹಿತ್ಯ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು. ಇದರಿಂದ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ’ ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ, ‘ದೇಶದ ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಸಂತಸದ ವಿಷಯ. ಖವ್ವಾಲಿಯ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಾಗುತ್ತದೆ. ರಾಷ್ಟ್ರೀಯ ಭಾವೈಕ್ಯ ಮತ್ತು ಅಂತರ ಸಾಂಸ್ಕೃತಿಕ ಚಿಂತನೆ ಬೆಳೆಸಲು ಸಾಧ್ಯವಾಗುತ್ತದೆ’ ಎಂದರು.

ಸಿಂಡಿಕೇಟ್ ಸದಸ್ಯೆ ಪ್ರೊ. ಸಿ.ಸುಲೋಚನಾ, ಮೌಲ್ಯಮಾಪನ ಕುಲಸಚಿವೆ ಪ್ರೊ. ಮೇಧಾವಿನಿ ಕಟ್ಟಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಹಾಗೂ ಸಾಂಸ್ಕೃತಿಕ ಸಂಯೋಜಕ ಪ್ರೊ. ಕೆ.ಲಿಂಗಪ್ಪ ಉಪಸ್ಥಿತರಿದ್ದರು.

ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಪ್ರೊ. ಪರಿಮಳಾ ಅಂಬೇಕರ್ ಸ್ವಾಗತಿಸಿದರು. ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಪ್ರಾಧ್ಯಾಪಕ ಎಂ.ಬಿ.ಕಟ್ಟಿ ವಂದಿಸಿದರು. ಕಲಾ ನಿಕಾಯದ ಡೀನ್ ಪ್ರೊ. ಅಬ್ದುಲ್ ರಬ್ ಉಸ್ತಾದ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.