
ವಾಡಿ: ಲಾಡ್ಲಾಪುರ ಗ್ರಾಮದಲ್ಲಿ ಶುಕ್ರವಾರ ಮೊದಲ ಹಂತವಾಗಿ 34 ಸಾಕುನಾಯಿಗಳಿಗೆ ರೇಬಿಸ್ ಚುಚ್ಚುಮದ್ದು ನೀಡಲಾಯಿತು.
ನಾಯಿ ಕಚ್ಚಿದರೂ ಸೋಂಕು ಹರಡದಂತೆ ಮುಂಜಾಗೃತೆ ದೃಷ್ಟಿಯಿಂದ ನಾಯಿ ಸಾಕಿದವರ ಮನೆಮನೆಗೆ ತೆರಳಿದ ಪಶು ಇಲಾಖೆ ಸಿಬ್ಬಂದಿಗಳು ಚುಚ್ಚುಮದ್ದು ನೀಡಿದರು. ಹಾಗೂ ನಾಯಿಗಳ ಜತೆಗೆ ವರ್ತಿಸಬೇಕಾದ ರೀತಿಗಳ ಬಗೆಗೆ ಮಾಲೀಕರಲ್ಲಿ ಅರಿವು ಮೂಡಿಸಿದರು.
ಪಿಡಿಓ ಮಲ್ಲೇಶಪ್ಪಾ ಮಾಲಿಪಾಟೀಲ, ಪಶು ವೈದ್ಯಾಧಿಕಾರಿಗಳಾದ ಡಾ.ಸಿ.ಎನ್.ವಿಜಯಕುಮಾರ, ದೇವಿಂದ್ರ, ವಾಜಿದ ಮಿಯಾ, ಭೀಮಶಂಕರ ಭಜಂತ್ರಿ ಹಾಗೂ ಇನ್ನಿತರರು ಇದ್ದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಯಿಗಳಿಂದ ರಕ್ಷಣೆ ಪಡೆಯುವ ವಿಧಾನ, ಕಚ್ಚಿದಾಗ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಪಶು ವೈದ್ಯಕೀಯ ಇಲಾಖೆ ಮತ್ತು ಸ್ಥಳೀಯ ಗ್ರಾಪಂ ವತಿಯಿಂದ ವತಿಯಿಂದ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಉದ್ದೇಶಿಸಿ ಪಶು ವೈದ್ಯಾಧಿಕಾರಿ ಡಾ.ಸಿ ಎನ್.ವಿಜಯಕುಮಾರ ಮಾತನಾಡಿದರು.
‘ಪ್ರಾಣಿಗಳಿಗೆ ಔಷಧ ತಿನಿಸುವಾಗ ಕೈಗೆ ಜೊಲ್ಲು ಮೆತ್ತಬಹುದು. ಆ ಜೊಲ್ಲಿನಲ್ಲಿ ರೋಗಾಣುಗಳು ಇದ್ದರೆ, ಕೈಯಲ್ಲಿ ಗಾಯಗಳೆನಾದರೂ ಇದ್ದರೆ ಅಪಾಯದ ಸಂಭವ ಜಾಸ್ತಿ. ಆದ್ದರಿಂದ ಎಚ್ಚರಿಕೆಯಿಂದ ಇರಬೇಕು. ಹುಚ್ಚು ಹಿಡಿದ ನಾಯಿಗಳಿಂದ ರೇಬಿಸ್ ರೋಗ ಬಲು ಬೇಗ ಹರಡುತ್ತದೆ. ನಾಯಿಯನ್ನು ಮುಟ್ಟಿದ ನಂತರ ಸೋಪು ಹಾಕಿ ಕೈಯನ್ನು ಚೆನ್ನಾಗಿ ತೊಳೆಯಬೇಕು. ನಾಯಿ ಕಚ್ಚಿದರೆ ಅಥವಾ ಪರಚಿದರೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಗ್ರಾಪಂ ಪಿಡಿಒ ಮಲ್ಲೇಶಪ್ಪ ಮಾಲಿಪಾಟೀಲ, ಮುಖ್ಯಗುರು ತಾರಕೇಶ್ವರಿ ಕಲಬುರಗಿ ಹಾಗೂ ಸಹಶಿಕ್ಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.