ADVERTISEMENT

ಕೊಳ್ಳೂರು: ರಭಸದ ಮಳೆ ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 2:09 IST
Last Updated 7 ಜೂನ್ 2021, 2:09 IST
ಚಿಂಚೋಳಿ ತಾಲ್ಲೂಕು ಕೊಳ್ಳೂರು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಮಳೆ ನೀರು ರಸ್ತೆಯ ಮೇಲೆ ತುಂಬಿ ಹರಿದು ಹೊಳೆಯಂತೆ ಗೋಚರಿಸಿತು
ಚಿಂಚೋಳಿ ತಾಲ್ಲೂಕು ಕೊಳ್ಳೂರು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಮಳೆ ನೀರು ರಸ್ತೆಯ ಮೇಲೆ ತುಂಬಿ ಹರಿದು ಹೊಳೆಯಂತೆ ಗೋಚರಿಸಿತು   

ಚಿಂಚೋಳಿ: ತಾಲ್ಲೂಕಿನ ವಿವಿಧೆಡೆ ಭಾನುವಾರ ಮಧ್ಯಾಹ್ನ ಬಿರುಸಿನ ಮಳೆ ಸುರಿದಿದೆ. ಇಲ್ಲಿನ ಕೊಳ್ಳೂರು ಗ್ರಾಮದಲ್ಲಿ ಮಳೆ ನೀರು ಮುಖ್ಯರಸ್ತೆಯಲ್ಲಿರುವ ಅಂಗಡಿ, ಮನೆಗಳಿಗೆ ನೀರು ನುಗ್ಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಧಾರಾಕಾರ ಮಳೆ ಸುರಿದಾಗಲೆಲ್ಲ ಈ ಗ್ರಾಮದ ಜನರು ಬೆಚ್ಚಿ ಬೀಳುವಂತಾಗಿದೆ. ಎರಡು ತೊರೆಗಳ ನೀರು ಗ್ರಾಮಕ್ಕೆ ನುಗ್ಗಿ ಮುಂದೆ ಹೋಗುವುದರಿಂದ ಗ್ರಾಮಸ್ಥರು ಪ್ರತಿ ಮಳೆಗಾಲದಲ್ಲಿಯೂ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಇದುವರೆಗೂ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ನಾಗಾಈದಲಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ 415 ಮನೆಗಳಿವೆ. ಅತಿವೃಷ್ಠಿ ಎದುರಾದಾಗಲೆಲ್ಲ ಗ್ರಾಮಸ್ಥರು ಭಯದಲ್ಲಿಯೇ ದಿನ ದೂಡುವುದು ಮಾಮೂಲಾಗಿದೆ.

ಗ್ರಾಮದಲ್ಲಿ ಪ್ರವಾಹ ಸ್ಥಿತಿ ಮಳೆಗಾಲದಲ್ಲಿ ಸರ್ವೆ ಸಾಮಾನ್ಯವಾಗಿದೆ ಈ ಸಮಸ್ಯೆಗೆ ಮುಕ್ತಿ ಸಿಗುವುದ್ಯಾವಾಗ ಎಂದು ಜನ ಕಾಯುತ್ತಿದ್ದಾರೆ. ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಸ್ವತ: ಜಿಲ್ಲಾಧಿಕಾರಿಯೆ ಗ್ರಾಮಕ್ಕೆ ಭೇಟಿ ನೀಡಿ ಅವಲೋಕಿಸಿದರೂ ಗ್ರಾಮಕ್ಕೆ ಪ್ರವಾಹದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರಾದ ಆಕಾಶ ಕೊಳ್ಳೂರು ಹಾಗೂ ಶಿವಕುಮಾರ ಪವಾಡಶೆಟ್ಟಿ ತಿಳಿಸಿದರು.

ADVERTISEMENT

ಒಂದೇ ಸಮನೆ ಜಡಿ ಮಳೆ ಸುರಿದರೆ ಇಲ್ಲಿನ ಮುಖ್ಯರಸ್ತೆಯಲ್ಲಿರುವ ಮತ್ತು ಮನೆಗಳು ಮತ್ತು ಅಂಗಡಿ ಹಾಗೂ ಪರಿಶಿಷ್ಟರ ಬಡಾವಣೆ ಮನೆಗಳಿಗೆ ನೀರು ನುಗ್ಗುವುದು ಮಾಮೂಲಾಗಿದೆ. ಅಕ್ಷರಶ: ಜನರ ನೆಮ್ಮದಿ ಹಾಳು ಮಾಡುವ ಮಳೆರಾಯನ ಕಾಟಕ್ಕೆ ಗ್ರಾಮದ 100ಕ್ಕೂ ಹೆಚ್ಚು ಮನೆಗಳು ತೊಂದರೆ ಸಿಲುಕುತ್ತವೆ. ದಿನಸಿ ಅಂಗಡಿ, ಚಹಾ ಹೋಟೇಲಗೂ ನೀರು ನುಗ್ಗುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಗ್ರಾಮದ ಮುಖಂಡ ಗೋಪಾಲರೆಡ್ಡಿ ಗೋವಿಂದನೋರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.