ADVERTISEMENT

ರಾಷ್ಟ್ರಕೂಟರ ಕಾಲಕ್ಕೆ ಎಲ್ಲೆಡೆ ಪಸರಿಸಿದ್ದ ಕನ್ನಡ: ವೀರಶೆಟ್ಟಿ

ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಕಾರ್ಯಕ್ರಮದಲ್ಲಿ ವೀರಶೆಟ್ಟಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 7:34 IST
Last Updated 23 ಜನವರಿ 2026, 7:34 IST
ಕಲಬುರಗಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾಜಿದ್ ದಾಗಿ, ಬಸವರಾಜ ಭಾಗಾ, ಶರಣಗೌಡ ಪಾಟೀಲ ಪಾಳಾ, ಆನಂದ ಸಿದ್ದಾಮಣಿ ಇತರರು ಭಾಗವಹಿಸಿದ್ದರು
ಕಲಬುರಗಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಮಾಜಿದ್ ದಾಗಿ, ಬಸವರಾಜ ಭಾಗಾ, ಶರಣಗೌಡ ಪಾಟೀಲ ಪಾಳಾ, ಆನಂದ ಸಿದ್ದಾಮಣಿ ಇತರರು ಭಾಗವಹಿಸಿದ್ದರು   

ಕಲಬುರಗಿ: ರಾಷ್ಟ್ರಕೂಟರ ಕಾಲಕ್ಕೆ ಆಡಳಿತ ಭಾಷೆಯಾಗಿ ಮೆರೆದ ಕನ್ನಡ ನಂತರದ ದಿನಗಳಲ್ಲಿ ಅವರ ಅವಸಾನದೊಂದಿಗೆ ಕ್ಷೀಣಿಸಲು ಆರಂಭಿಸಿತು ಎಂದು ವಿಭಾಗೀಯ ಪತ್ರಾಗಾರ ಕಚೇರಿಯ ಉಪನಿರ್ದೇಶಕ ವೀರಶೆಟ್ಟಿ ಗಾರಂಪಳ್ಳಿ ಹೇಳಿದರು.

ನಗರದ ಕಲಾಮಂಡಳದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ–ಕಲಬುರಗಿ ಸಹಯೋಗದಲ್ಲಿ ಸ್ವಾತಂತ್ರ್ಯಪೂರ್ವ ಹೈದರಾಬಾದ್ ಕರ್ನಾಟಕದ ಕನ್ನಡ ಪರಿಸರ ಎಂಬ ವಿಷಯದ ಮೇಲೆ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದರು.

ಇಲ್ಲಿ ಯಾವ ಭಾಷೆ, ಹೇಗೆ ಜನಸಮುದಾಯದೊಂದಿಗೆ ಬೆರೆತು ಕೆಲಸ ಮಾಡಿದೆ ಎಂಬುದನ್ನು ವಿವರಿಸಿದ ಅವರು, ‘ಅಪಾರ ಶ್ರಮದಿಂದ ಕಟ್ಟಿಕೊಂಡಿದ್ದ ಒಂದು ಭಾಷಿಕ ವಲಯ, ಕಾಲಾನಂತರ ಆಡಳಿತಾತ್ಮಕ ಮತ್ತು ರಾಜಕೀಯ ಕಾರಣಗಳಿಂದಾಗಿ (ಧಾರ್ಮಿಕ ಮತ್ತು ಸಾಮಾಜಿಕ ಕಟ್ಟುಪಾಡುಗಳು ಕೂಡ ಇದಕ್ಕೆ ಕಾರಣವಾಗಿದ್ದವು) ತನ್ನ ವ್ಯಾಪ್ತಿ ಮತ್ತು ಮೌಲ್ಯವನ್ನು ಕಳೆದುಕೊಂಡಾಗ ಹುಟ್ಟಿಕೊಳ್ಳುವ ಹೋರಾಟಗಳು ಅದನ್ನು ಮರುಕಟ್ಟುವ ಪ್ರಯತ್ನದಲ್ಲಿರುತ್ತವೆ. ಅಂಥದ್ದೊಂದು ಸಂದರ್ಭವನ್ನು ಹೈದರಾಬಾದ್ ಕರ್ನಾಟಕ ಎದುರಿಸಿದೆ’ ಎಂದರು.

ADVERTISEMENT

‘ರಾಷ್ಟ್ರಕೂಟರ ಕಾಲಕ್ಕೆ ಇಲ್ಲಿಂದಲೇ ಭಾರತದ ಉದ್ದಗಲಕ್ಕೂ ಮೆರೆದಿದ್ದ ಕನ್ನಡ ಭಾಷೆ ಮತ್ತು ಸಂಸ್ಕೃತಿ ಕಾಲಾನಂತರ ಸಡಿಲಗೊಳ್ಳುತ್ತ ಸಾಗಿ ನಂತರದ ದಿನಗಳಲ್ಲಿ ಕಣ್ಮರೆಯಾದ ಕಾಲಕ್ಕೆ ಹೈದರಾಬಾದ್ ಸಂಸ್ಥಾನವೆಂಬ ಆಡಳಿತ ಘಟಕವೊಂದು ರೂಪುಗೊಂಡಿತ್ತು. ಇದಕ್ಕೆ ಹೈದರಾಬಾದ್ ಸಂಸ್ಥಾನದ ಆಡಳಿತ ಕ್ರಮ ಎಷ್ಟು ಕಾರಣವೋ ಅಷ್ಟೇ ಅನ್ಯ ಕಾರಣಗಳು ಇವೆ. ಇದರಲ್ಲಿ ಕನ್ನಡ ಜನತೆಯ ನಿರಾಸಕ್ತಿಯೂ ಒಂದು’ ಎಂದು ಹೇಳಿದರು.

ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಸವರಾಜ ಭಾಗಾ ಅವರು ಹೈದರಾಬಾದ್ ಸಂಸ್ಥಾನದಲ್ಲಿ ಕನ್ನಡ ಕಟ್ಟಿದವರು ಹಾಗೂ ಮಾಜಿದ್ ದಾಗಿ ಸ್ವಾತಂತ್ರ್ಯಪೂರ್ವದ ಹೈದರಾಬಾದ್ ಕರ್ನಾಟಕದ ಉರ್ದು ಮತ್ತು ಪರ್ಷಿಯನ್ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು.

ಪ್ರಾಧಿಕಾರದ ಸದಸ್ಯ ವಿರೂಪಣ್ಣ ಕಲ್ಲೂರ, ಮಲ್ಲಿನಾಥ ನಾಗನಹಳ್ಳಿ, ಸಂಗಮೇಶ ಹಿರೇಮಠ, ಸಿದ್ದನಗೌಡ ಮಾಲಿ ಪಾಟೀಲ, ವಿನೋದ್ ಪಾಟೀಲ, ಗುಂಡಪ್ಪ ತಳವಾರ್ ಉಪಸ್ಥಿತರಿದ್ದರು. ಆನಂದ ಸಿದ್ದಾಮಣಿ, ವಿಶ್ವನಾಥ ಭಕರೆ, ಶರಣಬಸಪ್ಪ ವಡ್ಡನಕೇರಿ ಸಮಾರೋಪದಲ್ಲಿ ಭಾಗವಹಿಸಿದ್ದರು.

ಚಾಮರಾಜ ದೊಡ್ಡಮನಿ ಸ್ವಾಗತಿಸಿದರು. ಅಂಬಾರಾಯ ಮಡ್ಡೆ ನಿರೂಪಿಸಿದರು, ಅಂಬಾರಾಯ ಕೋಣೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.