ADVERTISEMENT

ಹಲಕರ್ಟಿ: ನ.17 ರಂದು ರಥೋತ್ಸವ

ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 10:33 IST
Last Updated 12 ನವೆಂಬರ್ 2019, 10:33 IST
ವಾಡಿ ಸಮೀಪದ ಹಲಕರ್ಟಿ ವೀರಭದ್ರೇಶ್ವರ ದೇವಸ್ಥಾನ
ವಾಡಿ ಸಮೀಪದ ಹಲಕರ್ಟಿ ವೀರಭದ್ರೇಶ್ವರ ದೇವಸ್ಥಾನ   

ವಾಡಿ: ಸಮೀಪದ ಹಲಕರ್ಟಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಇಂದು ಆರಂಭವಾಗಲಿದೆ.ರಾಷ್ಟ್ರೀಯ ಹೆದ್ದಾರಿ 150ಕ್ಕೆ ಹೊಂದಿಕೊಂಡಿರುವ ಹಲಕರ್ಟಿಯಲ್ಲಿ ಜಾತ್ರಾ ಸಂಭ್ರಮ ಮನೆ ಮಾಡಿದೆ. ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು ಕಣ್ಮನ ಸೆಳೆಯುತ್ತಿದೆ.

ಸ್ಥಳೀಯ ಕಟ್ಟಿಮನಿ ಹಿರೇಮಠದ ಮುನೀಂದ್ರ ಶಿವಾಚಾರ್ಯರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

ನ.12 ರಂದು ರಾತ್ರಿ 10 ಗಂಟೆಗೆ ಚಿಕ್ಕ ವೀರಪ್ಪನವರ ಮನೆಯಿಂದ ಮೈಲಾರಲಿಂಗನ ದೇವಸ್ಥಾನಕ್ಕೆ ಸಕಲ ವಾದ್ಯಗಳೊಂದಿಗೆ ಅಂಬಲಿ ಬಂಡಿ ಮೆರವಣಿಗೆ ನಡೆಯಲಿದೆ. ನ.13 ರಂದು ಸಂಜೆ 4 ಗಂಟೆಗೆ ಜೋಡು ಪಲ್ಲಕ್ಕಿ ಉತ್ಸವದೊಂದಿಗೆ ರುದ್ರಭೂಮಿಗೆ ಬಸವಣ್ಣಗೆ ಹೋಗುವುದು ನಡೆಯಲಿದೆ.

ADVERTISEMENT

ಸಂಜೆ 6 ಗಂಟೆಗೆ ‘ಚೌಡಮ್ಮನ ಗಂಗಸ್ಥಳ’ ಕಾರ್ಯಕ್ರಮ, ನ.14ರಂದು ರಾತ್ರಿ 11 ಗಂಟೆಗೆ ಪಲ್ಲಕ್ಕಿ ಸೇವೆ ಹಾಗೂ ಸಕಲ ವಾದ್ಯಮೇಳಗಳೊಂದಿಗೆ ಶೆಟ್ಟಿಯವರ ಮನೆಗೆ ಹೋಗುವುದು, ನ.15ರಂದು ರಾತ್ರಿ 1 ಗಂಟೆಗೆ ಮೈಲಾರಲಿಂಗನ ದೇವಸ್ಥಾನದಲ್ಲಿ ‘ಕಳ್ಳ ಸರಪಳಿ ಹರಿಯುವುದು’ ನಡೆಯಲಿದೆ. ನ.16ರಂದು ಸಂಜೆ 4 ಗಂಟೆಗೆ ‘ದೈವದ ಸರಪಳಿ’ ಹಾಗೂ ಮೈಲಾರಲಿಂಗನ ದೇವಸ್ಥಾನದಲ್ಲಿ ವಗ್ಗಯ್ಯಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 11 ಗಂಟೆಗೆ ಪುರವಂತರು ಹಾಗೂ ಭಕ್ತ ಸಮೂಹದಿಂದ ಅಗ್ನಿ ಪ್ರವೇಶ ಜರುಗಲಿದೆ. ನ.17ರಂದು ಧಾರ್ಮಿಕ ಕಾರ್ಯಕ್ರಮಗಳ ಅಂತಿಮ ಭಾಗವಾಗಿ ಸಂಜೆ 6 ಗಂಟೆಗೆ ಮಹಾ ರಥೋತ್ಸವ ಜರುಗಲಿದೆ.

ರಾಜ್ಯ ಹಾಗೂ ಹೊರರಾಜ್ಯಗಳ ಸಾವಿರಾರು ಭಕ್ತರ ಆರಾಧ್ಯ ದೈವವಾಗಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತನ್ನದೇ ಅದ ಐತಿಹಾಸಿಕ ಪರಂಪರೆ ಇದೆ. ವೈಭವದ ಜಾತ್ರೆಯ ಮೂಲಕ ಕಲಬುರ್ಗಿ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ.

ನಾಟಕ: ವೀರಭದ್ರೇಶ್ವರ ನಾಟ್ಯ ಸಂಘದ ವತಿಯಿಂದ ನ.16 ರಿಂದ 3 ದಿನಗಳ ಕಾಲ ರಾತ್ರಿ 10 ಗಂಟೆಗೆ 'ಪಾಪ ತೊಳೆದ ಪುಣ್ಯವಂತೆ' ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.