ಆಳಂದ: ‘ವಿದ್ಯಾರ್ಥಿಗಳು ಶಾಲಾ ಪಠ್ಯ ಚಟುವಟಿಕೆಗಳ ಜತೆಯಲ್ಲಿ ಮಹಾತ್ಮರ ಜೀವನ ಚರಿತ್ರೆ, ಕತೆ, ಕಾದಂಬರಿ, ಪುಸ್ತಕ ಹಾಗೂ ಪತ್ರಿಕೆ ಓದುವ ಹವ್ಯಾಸವು ಭವಿಷ್ಯದಲ್ಲಿ ಉತ್ತಮ ಸಾಧನೆಗೆ ಪ್ರೇರಣೆ ಆಗಲಿದೆ’ ಎಂದು ಹಿರೇಮಠ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಮಲ್ಲಿನಾಥ ಯಲಶೆಟ್ಟಿ ತಿಳಿಸಿದರು.
ಪಟ್ಟಣದ ಸಿದ್ಧಲಿಂಗ ಶಿವಾಚಾರ್ಯ ಹಿರೇಮಠ ಶಾಲೆಯಲ್ಲಿ ಭಾನುವಾರ ಮಹಾಕಾಶಿ ಶಿಕ್ಷಣ ತರಬೇತಿ ಕೇಂದ್ರದಿಂದ ಹಮ್ಮಿಕೊಂಡ ಬೇಸಿಗೆ ತರಬೇತಿ ಕೇಂದ್ರದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಮೊಬೈಲ್, ರೀಲ್ಸ್, ವಾಟ್ಸಪ್ ಗೀಳು ನಿಮ್ಮ ಶೈಕ್ಷಣಿಕ ಸಾಧನೆ ಮೇಲೆ ಪರಿಣಾಮ ಬೀರುವದು. ಸ್ಮರಣಶಕ್ತಿ ಕ್ಷೀಣಗೊಳ್ಳುತ್ತದೆ. ಏಕಾಗ್ರತೆ ಸಮಸ್ಯೆ ಕಾಡುವುದು. ವಿದ್ಯಾರ್ಥಿಗಳು ನಿರಂತರ ಓದಿನ ಜತೆಗೆ ಧ್ಯಾನ, ವ್ಯಾಯಾಮ, ಸಂಗೀತ ಅಭ್ಯಾಸ, ಆಟೋಟ ಹಾಗೂ ಉತ್ತಮ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.
ವಚನ ಸಾಹಿತ್ಯ ಪರಿಷತ್ತಿನ ತಾಲ್ಲೂಕಾಧ್ಯಕ್ಷ ಅಪ್ಪಾಸಾಹೇಬ ತೀರ್ಥೆ ಮಾತನಾಡಿ, ‘ಮಹಾಕಾಶಿ ತರಬೇತಿ ಕೇಂದ್ರವು ವರ್ಷವಿಡೀ ಶೈಕ್ಷಣಿಕ ಚಟುವಟಿಕೆಗಳ ವ್ಯವಸ್ಥೆಗೊಳಿಸುವುದರಿಂದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಶಿಬಿರದಲ್ಲಿ ಕಲಿತ ಜ್ಞಾನಾನುಭವಗಳನ್ನು ನಿರಂತರವಾಗಿ ರೂಢಿಸಿಕೊಂಡರೆ ಯಶಸ್ಸು ಅನುಕೂಲವಾಗಲಿದೆ’ ಎಂದರು.
ಕೇಂದ್ರದ ಸಂಯೋಜಕ ಶಶಿಕಾಂತ ಫುಲಾರೆ ಮಾತನಾಡಿ, ‘ಮೂರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ವಿವಿಧ ಪರೀಕ್ಷೆಗಳಲ್ಲಿ ನಮ್ಮ ವಿದ್ಯಾರ್ಥಿಗಳ ಸಾಧನೆ ಖುಷಿ ನೀಡಿದೆ. ಹಿರೇಮಠ ಸಂಸ್ಥೆ ಕಾರ್ಯದರ್ಶಿ ಅಣ್ಣಾರಾವ ಪಾಟೀಲ, ಪ್ರಾಂಶುಪಾಲ ಸಂಜಯ ಪಾಟೀಲ, ತಲೆಕುಣಿ ಶಾಲೆ ಮುಖ್ಯಶಿಕ್ಷಕ ಅಣವೀರಪ್ಪ ಸುತಾರ, ದೀಪಕ ಗುಂಡಗೋಳೆ, ಸುಕಮುನಿ ಪಾಟೀಲ, ನಿಂಗಣ್ಣ ಸಲಗರೆ, ಕಳಕೇಶ ಕೆರೂರು, ಪರಮೇಶ್ವರ ಕಾಮನಹಳ್ಳಿ, ಸಂಗೀತಾ ಹಿರೇಮಠ ಉಪಸ್ಥಿತರಿದ್ದರು. ಮಹೇಶ ಪಾಟೀಲ ಸ್ವಾಗತಿಸಿದರು. ಸಿದ್ದಾರ್ಥ ಹಸೂರೆ ನಿರೂಪಿಸಿದರು. ಚಂದ್ರಶೇಖರ ಕಡಗಂಚಿ ವಂದಿಸಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಹಾದೇವ ಯಲಶೆಟ್ಟಿ, ಸಾಕ್ಷಿ, ಸ್ನೇಹಾ ಖಂಡಾಳೆ, ಪವನ ಪಾವಲೆ, ಪೃಥ್ವಿರಾಜ, ಸಂಕೇತ, ಋತೀಜಾ ವಿದ್ಯಾರ್ಥಿಗಳನ್ನು ತರಬೇತಿ ಕೇಂದ್ರದಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶಿಬಿರದಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.