ಕಲಬುರ್ಗಿ:ಕೇಂದ್ರ ಸರ್ಕಾರ ತೊಗರಿ ಬೆಳೆಗೆ ಕೇವಲ ₹ 5,800 ಬೆಂಬಲ ಬೆಲೆಯನ್ನು ಘೋಷಿಸಿದೆ. ಇದು ತಲಾ ಕ್ವಿಂಟಾಲ್ ಉತ್ಪಾದನೆಗೆ ತಗಲುವ ಉತ್ಪಾದನಾ ವೆಚ್ಚಕ್ಕಿಂತ ₹ 200 ಕಡಿಮೆಯಾಗಿದೆ. ಇದರಿಂದ ರೈತರಿಗೆ ತಲಾ ಎಕರೆಗೆ ₹ 1 ಸಾವಿರ ಉತ್ಪಾದನಾ ವೆಚ್ಚ ನಷ್ಟ ಉಂಟು ಮಾಡಲಿದ್ದು, ಸರ್ಕಾರ ನಷ್ಟ ಪರಿಹಾರ ನೀಡಬೇಕು ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಯು.ಬಸವರಾಜ ಒತ್ತಾಯಿಸಿದ್ದಾರೆ.
ಶುಕ್ರವಾರ ನಗರಕ್ಕೆ ಭೇಟಿ ನೀಡಿದ ವೇಳೆ ಈ ಹೇಳಿಕೆ ನೀಡಿರುವ ಅವರು, ‘ಡಾ. ಎಂ.ಎಸ್ ಸ್ವಾಮಿನಾಥನ್ ಕೃಷಿ ಆಯೋಗ ಉತ್ಪಾದನಾ ವೆಚ್ಚಕ್ಕೆ ಶೇ 50ರಷ್ಟು ಲಾಭಾಂಶ ಸೇರಿಸಿ ಬೆಂಬಲ ಬೆಲೆ ನಿಗದಿಪಡಿಸಲು ಹೇಳಿದೆ. ಆದರಂತೆ ತಲಾ ಕ್ವಿಂಟಾಲ್ಗೆ ₹ 9 ಸಾವಿರ ನಿಗದಿಸಬೇಕು. ಆದರೆ ಕೇಂದ್ರ ಸರ್ಕಾರ ಅದನ್ನು ಈಗಲೂ ಪರಿಗಣಿಸದಿರುವುದು ಖೇದಕರ ಎಂದಿದ್ದಾರೆ.
‘ತೊಗರಿ ಬೆಳೆಯು ಆರು ತಿಂಗಳ ಬೆಳೆಯಾಗಿದ್ದು ಜೂನ್ ತಿಂಗಳಲ್ಲಿ ಬಿತ್ತನೆಯಾಗಿ ಡಿಸೆಂಬರ್ ತಿಂಗಳಲ್ಲಿ ಕೊಯ್ಲಾಗಲಿದೆ. ರಾಜ್ಯದಲ್ಲಿ ಶೇ 85ರಷ್ಟು ಬಡ ರೈತರು ಅದಾಗಲೇ ತಲಾ ಕ್ವಿಂಟಲ್ಗೆ ₹ 4,500ರಂತೆ ಕಡಿಮೆ ಬೆಲೆಗೆ ಮಾರಾಟ ಮಾಡಿ ತಲಾ ಕ್ವಿಂಟಲ್ಗೆ ಉತ್ಪಾದನಾ ವೆಚ್ಚಕ್ಕೆ ಕನಿಷ್ಠ ₹ 1,500ರಂತೆ, ಪ್ರತಿ ಎಕರೆಗೆ ಸ್ವಾಮಿನಾಥನ್ ಆಯೋಗದ ಬೆಲೆಗೆ ಹೋಲಿಸಿದರೆ ಪ್ರತಿ ಎಕರೆಗೆ ₹ 22,500 ನಷ್ಟ ಉಂಟು ಮಾಡಿಕೊಂಡಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳು, ರಾಜ್ಯದಾದ್ಯಂತ ಕಳೆದ ನವೆಂಬರ್ ತಿಂಗಳ ಕೊನೆಯಲ್ಲಿ ಖರೀಧಿ ಕೇಂದ್ರಗಳನ್ನು ತೆರೆದಿದ್ದರೇ ಖಾಸಗೀ ವರ್ತಕರು ಕೇವಲ 4,500 ರೂಗಳಿಗೆ ಖರೀದಿಸುವುದರಿಂದ ಆಗುವ ಉತ್ಪಾದನಾ ವೆಚ್ಚದ ನಷ್ಠವನ್ನು ಬೆಂಬಲ ಬೆಲೆಗೆ ಖರೀದಿಸಿದಲ್ಲಿ ತಡೆಯಬಹುದಾಗಿತ್ತು. ಮಾತ್ರವಲ್ಲಾ ಅಳಿದುಲಕಿದ ರೈತರ ನಷ್ಠ ತಡೆಯಲು ಈಗಲೂ ಖರೀದಿ ಕೇಂದ್ರಗಳನ್ನು ತೆರೆಯದೇ ವಂಚಿಸುತ್ತಿವೆ ಎಂದು ಟೀಕಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.