ADVERTISEMENT

ಚಿಂಚೋಳಿ: ಪ್ರಯೋಗಾಲಯ ವರದಿ ಬರುವ ಮುನ್ನವೇ ಕ್ವಾರಂಟೈನಿಗಳ ಬಿಡುಗಡೆ!

​ಪ್ರಜಾವಾಣಿ ವಾರ್ತೆ
Published 30 ಮೇ 2020, 9:38 IST
Last Updated 30 ಮೇ 2020, 9:38 IST
ಚಿಂಚೋಳಿಯ ಚಂದಾಪುರದ ಬಾಲಕಿಯರ ವಸತಿ ನಿಲಯದಲ್ಲಿ ತೆರೆದ ಕ್ವಾರಂಟೈನ್ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಗುಳೆ ಕಾರ್ಮಿಕರನ್ನು ಬಿಡುಗಡೆ ಮಾಡಲಾಯಿತು
ಚಿಂಚೋಳಿಯ ಚಂದಾಪುರದ ಬಾಲಕಿಯರ ವಸತಿ ನಿಲಯದಲ್ಲಿ ತೆರೆದ ಕ್ವಾರಂಟೈನ್ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಗುಳೆ ಕಾರ್ಮಿಕರನ್ನು ಬಿಡುಗಡೆ ಮಾಡಲಾಯಿತು   

ಚಿಂಚೋಳಿ: ತಾಲ್ಲೂಕಿನ ವಿವಿಧ ಕ್ವಾರಂಟೈನ್ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ 2,400ಕ್ಕೂ ಅಧಿಕ ಜನರನ್ನು ಕ್ವಾರಂಟೈನ್ ಕೇಂದ್ರಗಳಿಂದ ಬಿಡುಗಡೆಗೊಳಿಸಲಾಗಿದೆ ಎಂದು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ತಿಳಿಸಿದ್ದಾರೆ.

ಕೆಲವರು 14 ದಿನಗಳಿಗಿಂತ ಹೆಚ್ಚು ದಿನ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದರು. ಇವರಲ್ಲಿ ರೋಗದ ಲಕ್ಷಣಗಳು ಕಾಣಿಸದ ಕಾರಣ ಬಿಡುಗಡೆ ಮಾಡಲಾಗಿದೆ. ಕೊರೊನಾ ಲಕ್ಷಣಗಳು ಕಾಣಿಸದೇ ಇದ್ದರೆ 14 ದಿನಗಳ ಬದಲಾಗಿ 7 ದಿನಗಳಿಗೆ ಕ್ವಾರಂಟೈನ್ ಅವಧಿ ಸೀಮಿತಗೊಳಿಸಿ ಸರ್ಕಾರದ ಆದೇಶ ಮಾಡಿದ್ದರಿಂದ ಕ್ವಾರಂಟೈನ್ ಕೇಂದ್ರಗಳಿಂದ ಕಾರ್ಮಿಕರನ್ನು ಮನೆಗೆ ಕಳುಹಿಸಲಾಗುತ್ತಿದೆ ಎಂದರು.

ಕ್ವಾರಂಟೈನ್ ಕೇಂದ್ರಗಳಲ್ಲಿ ಆಶ್ರಯ ಪಡೆದ ಎಲ್ಲರನ್ನೂ ಕೋವಿಡ್‌ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಶೇ 50ಕ್ಕೂ ಹೆಚ್ಚು ಜನರ ವರದಿಗಳು ಇನ್ನೂ ಬಂದಿಲ್ಲ. ಆದರೂ ಅವರನ್ನು ಕ್ವಾರಂಟೈನ್‌ ಕೇಂದ್ರಗಳಿಂದ ಬಿಡುಗಡೆ ಮಾಡಲಾಗಿದೆ. ತಾಲ್ಲೂಕಿನಲ್ಲಿ ಜನವಸತಿ ಪ್ರದೇಶದಲ್ಲಿ ಕೊವಿಡ್–19 ಪ್ರಕರಣ ಪತ್ತೆಯಾಗಿಲ್ಲ. ಪತ್ತೆಯಾಗಿರುವ ಪ್ರಕರಣಗಳು ಕ್ವಾರಂಟೈನ್ ಕೇಂದ್ರಗಳಿಗೆ ಸೀಮಿತ ಆಗಿರುವುದರಿಂದ ಅಧಿಕಾರಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ADVERTISEMENT

‘ತಾಲ್ಲೂಕಿನಲ್ಲಿ ಒಟ್ಟು 36 ಕ್ವಾರಂಟೈನ್ ಕೇಂದ್ರ ತೆರೆದು 2,498 ಜನರಿಗೆ ಆಶ್ರಯ ಕಲ್ಪಿಸಲಾಗಿತ್ತು. ಇವರೆಲ್ಲರನ್ನು ಕೋವಿಡ್ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಯಾರಲ್ಲಿಯೂ ರೋಗ ಲಕ್ಷಣಗಳು ಗೋಚರಿಸಿಲ್ಲ’ ಎಂದು ಟಿಎಚ್‌ಒ ಡಾ.ದೀಪಕ ಪಾಟೀಲ ತಿಳಿಸಿದ್ದಾರೆ.

‘ತಾಲ್ಲೂಕಿನಲ್ಲಿ 30 ಕ್ವಾರಂಟೈನ್ ಕೇಂದ್ರಗಳು ಮುಚ್ಚಲಾಗಿದೆ. ಸದ್ಯ 6 ಕೇಂದ್ರಗಳಲ್ಲಿ 57 ಮಂದಿ ಆಶ್ರಯ ಪಡೆದಿದ್ದಾರೆ. ಇವರು 7 ದಿನ ಪೂರೈಸದ ಕಾರಣ ಅವರನ್ನು ಕೇಂದ್ರದಿಂದ ಬಿಡುಗಡೆ ಮಾಡಿಲ್ಲ’ ಎಂದು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.