ಚಿಂಚೋಳಿ: ತಾಲ್ಲೂಕು ಕೇಂದ್ರದಿಂದ 7 ಕಿ.ಮೀ. ದೂರದ ಅಣವಾರ ಗ್ರಾಮದ ಸಂಪರ್ಕ ರಸ್ತೆ ಸಂಪೂರ್ಣ ಹಾಳಾಗಿದೆ.
ರಸ್ತೆ ಅವ್ಯವಸ್ಥೆಯಿಂದ ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಗ್ರಾಮವನ್ನು ಸಂಪರ್ಕಿಸವ ಮೂರು ಹಾದಿಗಳು ಸಹ ತಗ್ಗು–ಗುಂಡಿಗಳಿಂದ ತುಂಬಿವೆ. ಜನರು ತಾಲ್ಲೂಕು ಆಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ ಎಂದು ಗ್ರಾಮದ ಮುಖಂಡ ವೀರಶೆಟ್ಟಿ ಪಾಟೀಲ ದೂರಿದರು.
ಚಿಂಚೋಳಿಯಿಂದ ಹಾಳಬೊಮ್ಮನಳ್ಳಿ, ಪೋಲಕಪಳ್ಳಿ, ಫರ್ದಾರ ಮೋತಕಪಳ್ಳಿ ಮಾರ್ಗದಲ್ಲಿ ಮೂರು ರಸ್ತೆಗಳಿವೆ. ಹಾಳಬೊಮ್ಮನಳ್ಳಿ ಮಾರ್ಗದ ರಸ್ತೆ ಹೆಚ್ಚು ಬಳಕೆ ಆಗುತ್ತಿದೆ. ಚಿಂಚೋಳಿಯಿಂದ 7 ಹಾಗೂ ಪೋಲಕಪಳ್ಳಿ ಮಾರ್ಗವಾಗಿ 6ಕಿ.ಮೀ. ದೂರವಿದೆ. ಮೋತಕಪಳ್ಳಿ ರಸ್ತೆಯು ಸೇಡಂ, ತಾಂಡೂರು ಮತ್ತು ಸುಲೇಪೇಟ ಮೂಲಕ ಬರುವವರಿಗೆ ಅನುಕೂಲವಾಗಲಿದೆ.
ಉಮೇಶ ಜಾಧವ ಅವರು ಶಾಸಕರಾಗಿದ್ದಾಗಪೋಲಕಪಳ್ಳಿ ಬಳಿ ಬ್ರಿಜ್ ಕಂ ಬ್ಯಾರೇಜು ನಿರ್ಮಿಸಿದ್ದರು. ಎರಡೂ ಕಡೆ ಸಮಪರ್ಕಕ ರಸ್ತೆ ಇಲ್ಲದೇ ಜನ ತೊಂದರೆಗೆ ಸಿಲುಕಿದ್ದಾರೆ. ಹಾಳಬೊಮ್ಮನಳ್ಳಿ ಕಡೆಯ ಮೌನೇಶ್ವರ ದೇವಾಲಯದಿಂದ ಸಿದ್ದು ಪಾಟೀಲ ಫಾರ್ಮಹೌಸ್ವರೆಗೆ ಕಳೆದ 2 ವರ್ಷಗಳ ಹಿಂದೆ ರಸ್ತೆ ನಿರ್ಮಿಸಲಾಗಿತ್ತು. ಆದರೆ ಈಗ ಕಿತ್ತು ಹೋಗಿದೆ. ಹೊಸ ಊರು ಮತ್ತು ಹಳೆ ಊರಿನ ಮಧ್ಯೆ 3–4 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು ಅದು ಕಾಯಕಲ್ಪಕ್ಕಾಗಿ ಕಾಯುತ್ತಿದೆ ಎಂದು ಹೇಳಿದರು.
ಅಣವಾರ ಗ್ರಾಮದ ರಸ್ತೆಯ ದುರಸ್ತಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ₹1.5 ಕೋಟಿ ಮಂಜೂರಾಗಿದೆ. ಅಂದಾಜು ಪಟ್ಟಿ ಪಿಡಿಎ ಎಂಜಿನಿಯರಿಂಗ್ ಕಾಲೇಜಿಗೆ ತಾಂತ್ರಿಕ ಪರಿಶೀಲನೆಗೆ ಸಲ್ಲಿಸಲಾಗಿದೆ. ತಾಂತ್ರಿಕ ಪರಿಶೀಲನೆ ಪೂರ್ಣಗೊಂಡ ನಂತರ ಟೆಂಡರ್ ಪ್ರಕ್ರಿಯೆ ನಡೆಸಿ ಪಾರ್ಮಹೌಸ್ನಿಂದ ಹೊಸ ಊರಿನವರೆಗೆ ಸುಸಜ್ಜಿತ ರಸ್ತೆ ನಿರ್ಮಿಸಲಾಗುವುದು ಎಂದು ಪಂಚಾಯತ ರಾಜ್ ಉಪ ವಿಭಾಗದ ಎಇಇ ಅಹೆಮದ್ ಹುಸೇನ್ ‘ಪ್ರಜಾವಾಣಿ’ಗೆ ತಿಳಿಸಿದರು.
*ವರ್ಷದ ಹಿಂದೆಯೇ ರಸ್ತೆ ನಿರ್ಮಾಣವಾಗಬೇಕಿತ್ತು. ಇನ್ನೂ ಆಗದಿರುವುದರಿಂದ ಶಾಸಕರಲ್ಲಿ ಈ ಬಗ್ಗೆ ಮನವಿ ಮಾಡುತ್ತೇನೆ
ಆರ್. ಗಣಪತರಾವ್, ಕಾಂಗ್ರೆಸ್ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.