ADVERTISEMENT

ಕಮರವಾಡಿ ರಸ್ತೆ ದುರಸ್ತಿ ಆರಂಭ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 16:28 IST
Last Updated 15 ಡಿಸೆಂಬರ್ 2020, 16:28 IST
 ವಾಡಿ ಸಮೀಪದ ಕಮರವಾಡಿ ರಸ್ತೆಗೆ ಮುರುಂ ಹಾಕಿ ತಾತ್ಕಾಲಿಕ ದುರಸ್ತಿ ಮಾಡುತ್ತಿರುವುದು
 ವಾಡಿ ಸಮೀಪದ ಕಮರವಾಡಿ ರಸ್ತೆಗೆ ಮುರುಂ ಹಾಕಿ ತಾತ್ಕಾಲಿಕ ದುರಸ್ತಿ ಮಾಡುತ್ತಿರುವುದು   

ವಾಡಿ: ಆಳವಾದ ಕಂದಕ ಹಾಗೂ ತಗ್ಗು ದಿಣ್ಣೆಗಳಿಂದ ಕೂಡಿದ್ದ ಕಮರವಾಡಿ ರಸ್ತೆಯ ದುರಸ್ತಿ ಕಾರ್ಯ ಈಗ ಭರದಿಂದ ನಡೆಯುತ್ತಿದೆ.

ಹದಗೆಟ್ಟ ರಸ್ತೆಯ ಕುರಿತು ಡಿ. 11ರಂದು ‘ಪ್ರಜಾವಾಣಿ’ಯಲ್ಲಿ ‘ಕೆಸರು ಗದ್ದೆಯಾದ ಕಮರವಾಡಿ ರಸ್ತೆ’ ಎಂಬ ವರದಿ ಪ್ರಕಟಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಧಿಕಾರಿಗಳು ಹಾಳಾದ ರಸ್ತೆಯಲ್ಲಿನ ತಗ್ಗುಗಳಿಗೆ ಮುರುಂ ಹಾಕಿ ತಾತ್ಕಾಲಿಕ ದುರಸ್ತಿ ನಡೆಸುತ್ತಿದ್ದಾರೆ.

ಬಲರಾಮ್ ಚೌಕ್‌ನಿಂದ ಬಸವನಖಣಿ, ಕಮರವಾಡಿ, ಸೂಲಹಳ್ಳಿ, ಆಲೂರು, ಬೊಮ್ಮನಳ್ಳಿ, ಕರದಳ್ಳಿ ಹಾಗೂ ಆಲೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಕಳೆದ ಹಲವು ವರ್ಷಗಳಿಂದ ಹಾಳಾಗಿತ್ತು. ವಾಹನ ಸವಾರರ ಪಾಲಿಗೆ ನಿತ್ಯ ನರಕ ಸೃಷ್ಟಿಸಿತ್ತು. ಸುಮಾರು 8 ಕಿ.ಮೀ ರಸ್ತೆಯುದ್ದಕ್ಕೂ ಇದ್ದ ತಗ್ಗುಗಳು ವಾಹನ ಸವಾರರ ಪಾಲಿಗೆ ಅಕ್ಷರಶಃ ಪ್ರಾಣಭೀತಿ ಸೃಷ್ಟಿಸಿದ್ದವು. ಆದರೂ ದುರಸ್ತಿ ಮಾಡದೇ ಇರುವುದಕ್ಕೆ ಸ್ಥಳೀಯರು ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಮೇಲೆ ಹಿಡಿಶಾಪ ಹಾಕುತ್ತಿದ್ದರು. ಹದಗೆಟ್ಟ ರಸ್ತೆ ಮೇಲಿನ ತಗ್ಗುಗಳಲ್ಲಿ ಗಣಿಯ ನೀರು ಸಂಗ್ರಹಗೊಂಡು ಕಂದಕದ ಆಳ ಅರಿಯದೇ, ಹಲವು ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡ ಪ್ರಕರಣಗಳೂ ನಡೆದವು.

ADVERTISEMENT

ಅನಾಹುತಕ್ಕೆ ದಾರಿ ಮಾಡಿಕೊಡುತ್ತಿದ್ದ ತಗ್ಗುಗಳನ್ನು ಸದ್ಯ ಮುಚ್ಚುತ್ತಿರುವುದರಿಂದ ಈ ರಸ್ತೆಯ ಮೇಲೆ ನಿತ್ಯ ಸಂಚರಿಸುತ್ತಿರುವ ಬೈಕ್ ಸವಾರರು, ಆಟೊ ಹಾಗೂ ಲಾರಿ ಚಾಲಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ರಸ್ತೆಯನ್ನು ಡಾಂಬರೀಕರಣ ಮಾಡಿ ಸಮಸ್ಯೆಗೆ ಶಾಶ್ವತ ಮುಕ್ತಿ ದೊರಕಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.