ಕಲಬುರಗಿ: ‘ದೇಶದ ಎಲ್ಲ ಕಾನೂನುಗಳಿಗಿಂತ ಸಂವಿಧಾನವೇ ಮಿಗಿಲಾದದ್ದು. ಪ್ರತಿಯೊಬ್ಬ ಭಾರತೀಯರ ಆತ್ಮ ಗೌರವದ ಪ್ರತೀಕವಾಗಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಯಶವಂತರಾಯ ಅಷ್ಠಗಿ ಅಭಿಪ್ರಾಯಪಟ್ಟರು.
ನಗರದ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಕರ್ನಾಟಕ ಸಮತಾ ಸೈನಿಕ ದಳದ ವತಿಯಿಂದ ನಡೆದ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಓದಿಸಿದ ನಂತರ ಮಾತನಾಡಿದರು.
‘ಭಾರತದ ಸಂವಿಧಾನದ ಪೀಠಿಕೆಯು ನಮ್ಮ ದೇಶದ ಪವಿತ್ರ ಗ್ರಂಥವಾದ ಸಂವಿಧಾನದ ಆಶಯಗಳು ಹಾಗೂ ಆಕಾಂಕ್ಷೆಗಳ ಪ್ರತಿಬಿಂಬವಾಗಿದ್ದು, ಇದರ ಎಲ್ಲ ಶ್ರೇಯಸ್ಸು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ’ ಎಂದರು.
ಸಮತಾ ಸೈನಿಕ ದಳದ ವಿಭಾಗಿಯ ಅಧ್ಯಕ್ಷ ಸಂಜೀವಕುಮಾರ ಟಿ. ಮಾಲೆ ಮಾತನಾಡಿ, ‘ಭಾರತದ ಸಂವಿಧಾನವು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಮೂರು ಆಧಾರ ಸ್ತಂಭಗಳ ಮೇಲೆ ಗಟ್ಟಿಯಾಗಿ ಸ್ಥಾಪಿತವಾಗಿದೆ’ ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಜಾನೆ, ಜನಪದ ಕಲಾವಿದ ಎಂ.ಎನ್. ಸುಗಂಧಿ, ಮುಖಂಡರಾದ ಮಿಲಿಂದ್ ಕಣಮಸ, ಶಿವಮೂರ್ತಿ ಬಲಿಚಕ್ರವರ್ತಿ, ರಾಜು ಹರಸೂರ, ಮಲ್ಲಮ್ಮ ಜಗತ್, ವಿಜಯಕುಮಾರ್ ಭುಮಾಗರ್, ಅನಿಲಕುಮಾರ್ ದೇವರಮನಿ, ಸರುಬಾಯಿ ಕೃಷ್ಣಾನಗರ, ರುಕ್ಮಿಣಿ ರೋಜಾ, ಇಂದುಮತಿ ಭಾರತನೂರ್, ಯಶೋಧಾ ಕುಸನೂರ, ಸೂರ್ಯಕಾಂತ ಅಂಬಲಗಿ, ಸತೀಶ್ ಮದರಿ, ಡಾ.ಬಿ.ಆರ್. ಅಂಬೇಡ್ಕರ್ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಅರ್ಜುನ ಕಟ್ಟಿಮನಿ ಕಾಳನೂರ, ರಾಜಕುಮಾರ ರಾಠೋಡ, ಶರಣಪ್ಪ ಬಾಪುನಗರ, ಮಹಾದೇವಿ ಹೈಯಾಳಕರ, ಇಮಾಮಬಿ, ಪ್ರೇಮಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.