ಚಿಂಚೋಳಿ: ತಾಲ್ಲೂಕಿನ ಕೊಟಗಾ ಗ್ರಾಮದಲ್ಲಿ ಹಾಡು ಹಗಲೇ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕೊಟಗಾ ಗ್ರಾಮಕ್ಕೆ ಹೊಂದಿಕೊಂಡಂತೆಯೇ ಮುಲ್ಲಾಮಾರಿ ನದಿ ಹರಿಯುತ್ತದೆ ಇಲ್ಲಿಯೇ ಬ್ರಿಜ್ ಕಂ ಬ್ಯಾರೇಜು ನಿರ್ಮಿಸಲಾಗಿದೆ. ಬಾಂದಾರಿನಲ್ಲಿ ಸಂಗ್ರಹವಾದ ಅಪಾರ ಪ್ರಮಾಣದ ಮರಳಿನ ಲೂಟಿ ನಡೆಯುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ನದಿಗೊಂಟ ಸುಮಾರು 20ಕ್ಕೂ ಹೆಚ್ಚು ಕಡೆಗಳಲ್ಲಿ ಹಾಡುಹಗಲೇ ಮರಳು ನದಿಯಿಂದ ತಂದು ದಂಡೆ ಮೇಲೆ ದಾಸ್ತಾನು ಮಾಡಿಕೊಳ್ಳಲಾಗುತ್ತದೆ. ಸಂಜೆಗೆ ಟ್ರ್ಯಾಕ್ಟರ್ ಮೂಲಕ ಇದನ್ನು ಸಾಗಿಸುತ್ತಾರೆ. ಗ್ರಾಮಸ್ಥರು ಟ್ರ್ಯಾಕ್ಟರ್ ಮಾಲೀಕರಿಗೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ.
ಮರಳು ಮಾಫಿಯಾ ತಮ್ಮ ಪ್ರಭಾವ ಬಳಸಿಕೊಂಡು ಜನರ ಎಚ್ಚರಿಕೆ ಕಡೆಗಣಿಸಿ ವರ್ಷ ಪೂರ್ತಿ ಮರಳು ಲೂಟಿ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತ ಪತ್ರಿಕಾ ಹೇಳಿಕೆಗೆ ಗ್ರಾಮದ ಮುಖಂಡರಾದ ಗೌಡಪ್ಪ ಪೊಲೀಸ್ ಪಾಟೀಲ, ನಾಗರಾಜ ಶೇರಿಕಾರ, ಸಿದ್ರಾಮ ಉಚ್ಚೇದ್, ಭೀಮರಾವ ಶೇರಿಕಾರ, ಮಲ್ಲಿನಾಥ ಕಿಣಗಿ, ಶಿವಯ್ಯ ಸ್ಥಾವರ, ಸಿದ್ರಾಮ ಇಟಗಿ, ಸಿದ್ರಾಮ ಜಿ. ಶೇರಿಕಾರ, ನಾಗರಾಜ ಉಚ್ಚೇದ್, ವಿಶ್ವನಾಥ ಉಚ್ಛೇದ್ ಮತ್ತು ಸಂಗಮೇಶ ಶೇರಿಕಾರ ಸಹಿ ಹಾಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.