ಕಲಬುರ್ಗಿ: ‘ಕುಟುಂಬ ಹಾಗೂ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಲ್ಲಿ ಮಹಿಳೆಯರು ಯಾವತ್ತೂ ಹಿಂದೆ ಬಿದ್ದಿಲ್ಲ. ಆದರೆ, ತಮ್ಮ ವೈಯಕ್ತಿಕ ಸ್ವಚ್ಛತೆಯತ್ತ ಗಮನ ಹರಿಸುವುದು ಕಡಿಮೆ. ಈ ಸಣ್ಣ ನಿರ್ಲಕ್ಷ್ಯದಿಂದ ದೊಡ್ಡ ಅಪಾಯಗಳು ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ವೈಯಕ್ತಿಕ ಸ್ವಚ್ಛತೆಗೂ ಪ್ರಾಮುಖ್ಯತೆ ನೀಡಿ’ ಎಂದು ಜನ ಶಿಕ್ಷಣ ಸಂಸ್ಥಾನದ ತಾಲ್ಲೂಕು ಘಟಕದ ಸಂಯೋಜಕಿ ಪಾರ್ವತಿ ಹಿರೇಮಠ ಅವರು ಸಲಹೆ ನೀಡಿದರು.
ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಪ್ರಾಯೋಜಿತ ಸಂಸ್ಥೆಯಾದ ಇಲ್ಲಿನ ಜನ ಶಿಕ್ಷಣ ಸಂಸ್ಥಾನದ ವತಿಯಿಂದ ನಗರದ ಸುವರ್ಣನಗರ ಬಡಾವಣೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಸ್ವಚ್ಛತಾ ಪಕವಾಡ’ ಕಾರ್ಯಕ್ರಮದಡಿ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಬಳಕೆ ಮತ್ತು ಅದರ ಮಹತ್ವದ ಕುರಿತು ಅರಿವು ಮೂಡಿಸಿದರು.
ಸಂಪನ್ಮೂಲ ವ್ಯಕ್ತಿ ಸುಧಾರಾಣಿ ರಾಜಕುಮಾರ ಮಾತನಾಡಿ, ‘ಸ್ಯಾನಿಟರಿ ಪ್ಯಾಡ್ಗಳನ್ನು ಮಹಿಳೆಯರು ನಿಯಮಬದ್ಧವಾಗಿ ಬಳಸಿದರೆ ಶೇ 90ರಷ್ಟು ಸೋಂಕುಗಳು ಬರುವುದರಿಂದ ಕಾಪಾಡಿಕೊಳ್ಳಬಹುದು. ಅಲ್ಲದೇ ನಮ್ಮ ಕುಟುಂಬವನ್ನೂ ಆಸ್ಪತ್ರೆಯಿಂದ ದೂರ ಇಡಬಹುದು. ಅನಿರೀಕ್ಷಿತ ವೆಚ್ಚವನ್ನು ತಗ್ಗಿಸಬಹುದು. ಸೀರೆ, ಬಟ್ಟೆ ಖರೀದಿ ಮಾಡುವಲ್ಲಿ ತೋರುವ ಆಸಕ್ತಿಗಿಂತ ಹೆಚ್ಚಾಗಿ ಸ್ಯಾನಿಟರಿ ಪ್ಯಾಡ್ ಖರೀದಿ ಮಾಡುವುದು ಬಹಳ ಮುಖ್ಯ. ಎಲ್ಲ ಮಹಿಳೆಯರೂ ಇದನ್ನು ಅರ್ಥಮಾಡಿಕೊಳ್ಳಬೇಕು. ಋತುಚಕ್ರದ ಬಗ್ಗೆ ಮಡಿವಂತಿಕೆ ತೋರದೇ ಮುಕ್ತ ಮನಸ್ಸಿನಿಂದ ವೈದ್ಯರ ಬಳಿ ಹಂಚಿಕೊಳ್ಳಬೇಕು’ ಎಂದು ಸಲಹೆ
ನೀಡಿದರು.
ನಂತರ ಸುವರ್ಣ ನಗರದ ಬಡಾವಣೆಯ ಮನೆ– ಮನೆಗೂ ತೆರಳಿ ಸ್ಯಾನಿಟರಿ ಪ್ಯಾಡ್ ಬಗ್ಗೆ ಮಾಹಿತಿ ನೀಡಲಾಯಿತು. ನಾಗರತ್ನಾ ಶ್ರೀಮಂತ, ಜ್ಯೋತಿ ಬೆಲ್ಸೂರೆ ಹಾಗೂ ಬಡಾವಣೆಯ 70 ಮಹಿಳೆಯರು ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.