ಕಲಬುರಗಿ: ಇಲ್ಲಿನ ಹೊಸ ಜೇವರ್ಗಿ ರಸ್ತೆಯಲ್ಲಿರುವ ರಾಮ ಮಂದಿರದ ನಿರ್ಮಾತೃ, ಧರ್ಮದರ್ಶಿ ಪಾದೂರು ಸರಸ್ವತಿ ರಾಮಕೃಷ್ಣ ತಂತ್ರಿ (84) ಅವರು ಶುಕ್ರವಾರ ನಿಧನರಾದರು.
ಕಳೆದ ಕೆಲವು ದಿನಗಳಿಂದ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.ಉಡುಪಿ ಮೂಲದವರಾದ ಅವರ ಕುಟುಂಬ, ಕಲಬುರಗಿ ನಗರಕ್ಕೆ ವ್ಯಾಪಾರಕ್ಕಾಗಿ ಬಂದು ನೆಲೆಸಿತ್ತು. ಪತಿ ರಾಮಕೃಷ್ಣ ತಂತ್ರಿ ಅವರು ಮೋಹನ್ ಲಾಡ್ಜ್ ಕಟ್ಟಿದ ಬಳಿಕ, ಪಕ್ಕದಲ್ಲಿನ ನಿವಾಸದಲ್ಲಿ ದಂಪತಿ ವಾಸವಾಗಿದ್ದರು.1982ರಲ್ಲಿ ರಾಮಕೃಷ್ಣ ತಂತ್ರಿ ಅವರೂ ನಿಧನರಾಗಿದ್ದಾರೆ.
1994ರಲ್ಲಿ ಸರಸ್ವತಿ ಅವರೇ ಮುಂದಾಳತ್ವ ವಹಿಸಿ ರಾಮ ಮಂದಿರ ನಿರ್ಮಾಣ ಮಾಡಿದರು. ಪಾದೂರು ರಾಮಕೃಷ್ಣ ತಂತ್ರಿ ಚಾರಿಟಬಲ್ ಟ್ರಸ್ಟ್ನ ಮುಖ್ಯಸ್ಥರಾಗಿ, ಗುಲಬರ್ಗಾ ವಿ.ವಿ.ಯ ಪಾದೂರು ರಾಮಕೃಷ್ಣ ತಂತ್ರಿ ದತ್ತಿನಿಧಿಯ ಪ್ರಾಯೋಜಕರಾಗಿ, ಕಲಬುರಗಿ ಆಕಾಶವಾಣಿಯ ಸಂಗೀತ ವಿಭಾಗದ ಆಯ್ಕೆ ಸಮಿತಿ ಸದಸ್ಯರಾಗಿಯೂ ಅವರು ಸೇವೆ ಮಾಡಿದ್ದಾರೆ.
ಅವರಿಗೆ ಕುಟುಂಬದ ಸದಸ್ಯರು ಇರಲಿಲ್ಲ.ಉಡುಪಿಯ ಪಾಲಿಮಾರು ಮಠದ ಶ್ರೀಗಳ ಮಾರ್ಗದರ್ಶನದಲ್ಲಿ ಸರಸ್ವತಿ ಅವರ ಅಣ್ಣನ ಮಗ ವಿಧಿವಿಧಾನಗಳನ್ನು ಪೂರೈಸಿದರು. ನಗರದ ಚಿತ್ತಾರಿ ಸಾಮಿಲ್ ಹತ್ತಿರದ ರುದ್ರಭೂಮಿಯಲ್ಲಿ ಶುಕ್ರವಾರ ಸಂಜೆ ಅಂತ್ಯಕ್ರಿಯೆನೆರವೇರಿತು ಎಂದು ಟ್ರಸ್ಟ್ ಸದಸ್ಯರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.