ಶಹಾಬಾದ: ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತೋತ್ಸವ ಸಮಿತಿ ಅಧ್ಯಕ್ಷ ಶಂಕರ ಅಳ್ಳೊಳ್ಳಿ ಮೇಲೆ ಗುರುವಾರ ಸಂಜೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದ್ದು, ಕೂದಲೆಳೆಯ ಅಂತರದಲ್ಲಿ ಬಚಾವಾಗಿದ್ದು, ಹೈವೇ ಪೆಟ್ರೋಲಿಂಗ ವಾಹನದಲ್ಲಿ ಪರಾರಿಯಾಗಿದ್ದರಿಂದ ಪ್ರಾಣ ಉಳಿದಿದೆ.
ಸಂಜೆ ನಗರದ ಹೊರ ವಲಯದ ಭಂಕೂರ ಶಾಂತ ನಗರದ ಐನಾಪೂರ ಡಾಬಾದಲ್ಲಿ ಶಂಕರ ಸಂಬಂಧಿಕರು, ಗೆಳೆಯರೊಂದಿಗೆ ಊಟ ಮಾಡುತ್ತಿರುವ ಸಂದರ್ಭದಲ್ಲಿ ಬಿಳಿ ಬಣ್ಣದ ಸ್ಕಾರ್ಪಿಯೋದಲ್ಲಿ ಬಂದ 7, 8 ಜನ ಯುವಕರು, ಶಂಕರ ಹೆಸರು ಹೇಳಿ ಎಂದು ಕೂಗಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಶಂಕರನ ತಲೆಗೆ ಗಾಯವಾಗಿದ್ದು, ಮೈಗೆ ಸಣ್ಣಪುಟ್ಟಗಾಯವಾಗಿವೆ ಎಂದು ಹೇಳಲಾಗಿದೆ.
ಹಲ್ಲೆ ಮಾಡುತ್ತಿರುವುದನ್ನು ಅರಿತ ಶಂಕರ ಅಲ್ಲಿಂದ ಪರಾರಿಯಾಗಲು ಡಾಬಾದ ಅಡುಗೆ ಮನೆಯಿಂದ ಹಿಂದುಗಡೆ ಓಡಿ, ಡಾಬಾ ಹಿಂದಿನಿಂದ ಹೆದ್ದಾರಿಗೆ ಕಡೆಗೆ ಓಡಿ ಬಂದಿದ್ದಾರೆ.
ಡಾಬಾದಲ್ಲಿ ನಡೆಯುತ್ತಿರುವ ಗದ್ದಲ ಶಬ್ದ ಕೇಳಿ ಹೈವೇ ಪೆಟ್ರೋಲಿಂಗ ವಾಹನದಲ್ಲಿದ್ದ ಪೊಲೀಸರು ಡಾಬಾದಲ್ಲಿ ಬಂದಿದ್ದಾರೆ. ಪೊಲೀಸರು ವಾಹನದ ಕೀ ಅಲ್ಲೇ ಬಿಟ್ಟಿದ್ದರಿಂದ ಶಂಕರ ವಾಹನದ ಹಿಂದೆ ಕುಳಿತ್ತಿದ್ದಾರೆ. ಹಲ್ಲೆಕೋರರು ಹೈವೇ ಪೆಟ್ರೋಲಿಂಗ ವಾಹನದ ಮೇಲೆ ದಾಳಿ ಮಾಡಿದಾಗ, ಶಂಕರ ಚಾಲಕನ ಸ್ಥಾನದಲ್ಲಿ ಕುಳಿತು ತಾವೇ ವಾಹನ ಚಲಾಯಿಸಿಕೊಂಡು ಕಲಬುರಗಿಯತ್ತ ಹೋಗಿದ್ದಾರೆ. ಹಲ್ಲೆ ಕೋರರು ತಮ್ಮ ವಾಹನದಲ್ಲಿ ಬೆನ್ನು ಹತ್ತಿದಾಗ, ಮರತೂರ ಕ್ರಾಸ್ನತ್ತ ಹೊರಳಿ ರಸ್ತೆ ಬದಿಗೆ ಇದ್ದ ಕಟ್ಟಿಗೆ ತುಂಡುಗಳಿಗೆ ಹಾಯಿಸಿದ್ದರಿಂದ ಪೆಟ್ರೋಲಿಂಗ್ ವಾಹನ ಜಖಂ ಆಗಿದೆ. ಆತನನ್ನು ಕಲಬುರಗಿ ಖಾಸಗಿ ಆಸ್ಪತ್ರೆ ಸೇರಿಸಲಾಗಿದೆ.
ದಾಳಿ ಸಂದರ್ಭದಲ್ಲಿ ಒಂದು ಸುತ್ತು ಗುಂಡು ಹಾರಿಸಲಾಗಿದ್ದು, ಯಾರಿಂದ ಗುಂಡು ಹಾರಿದೆ ಎಂಬುದು ಸ್ಪಷ್ಟವಾಗಿಲ್ಲ, ಡಾಬಾದಲ್ಲಿ ರಕ್ತ, ಒಂದು ಗುಂಡು, ತಲೆಗೆ ಪೆಟ್ಟು ಬಿದ್ದಿದ್ದರಿಂದ ಕೂದಲು ಬಿದ್ದಿವೆ.
ಸ್ಥಳಕ್ಕೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್ಪಿ ಶಂಕರಗೌಡ ಪಾಟೀಲ, ಪಿಐ ನಟರಾಜ ಲಾಡೆ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.