ADVERTISEMENT

ಶರಣಬಸವ ವಿ.ವಿ: ನ. 13ರಿಂದ ಯುವಜನೋತ್ಸವ

ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿವಿಧ ರಾಜ್ಯಗಳ ಭಾಷಾತಜ್ಞರು ಭಾಗಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 12:09 IST
Last Updated 5 ನವೆಂಬರ್ 2019, 12:09 IST
ಡಾ.ಶರಣಬಸವಪ್ಪ ಅಪ್ಪ
ಡಾ.ಶರಣಬಸವಪ್ಪ ಅಪ್ಪ   

ಕಲಬುರ್ಗಿ:ಶರಣಬಸವ ವಿಶ್ವವಿದ್ಯಾಲಯವು ಇದೇ 13–14ರಂದು ವಿ.ವಿ. ಆವರಣದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇರಿದಂತೆ ವಿವಿಧ ಸ್ಪರ್ಧೆಗಳನ್ನೊಳಗೊಂಡ ಯುವಜನೋತ್ಸವವನ್ನು ಆಯೋಜಿಸಿದ್ದು, ವಿಶ್ವವಿದ್ಯಾಲಯದ ಕುಲಾಧಿಪತಿಯಾದ ಡಾ.ಶರಣಬಸವಪ್ಪ ಅಪ್ಪಾ ಉದ್ಘಾಟಿಸಲಿದ್ದಾರೆ.

ನಗರದ ಶತಮಾನೋತ್ಸವ ಸಭಾಂಗಣದಲ್ಲಿ ನ 14ರಂದು ಸಂಜೆ ಡಾ. ಅಪ್ಪ ಅವರ 85ನೇ ಜನ್ಮದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಸುಲಫಲ ಮಠದ ಶ್ರೀಶೈಲ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹಾಗೂ ಚೌದಾಪೂರ ಮಠದ ರಾಜಶೇಖರ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಂತರ ಯುವಜನೋತ್ಸವ ಜರುಗಲಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ತಿಳಿಸಿದರು.

ಯುವಜನೋತ್ಸವ ಮತ್ತು ಜನ್ಮದಿನಾಚರಣೆಯ ಬಗ್ಗೆ ನ. 8ರಂದು ಬಹುಭಾಷಾ ಕವಿಗಳ ಸಭೆಯನ್ನು ಅಪ್ಪ ಅವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿದೆ. ಕುಲಪತಿ ಡಾ.ನಿರಂಜನ ನಿಷ್ಠಿ ಉದ್ಘಾಟಿಸಲಿದ್ದಾರೆ. ಪ್ರೊ.ವಸಂತ ಕುಷ್ಟಗಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭಂದ್ರ ಸಿಂಪಿ ಹಾಗೂ ಶಸ್ತ್ರಚಿಕಿತ್ಸಕ ಡಾ. ಮಲ್ಲಿಕಾರ್ಜುನ ವಿ. ನಿಷ್ಠಿ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ, ಸಂಸ್ಕೃತ, ಇಂಗ್ಲಿಷ್‌, ಉರ್ದು, ಹಿಂದಿ ಮತ್ತು ಮರಾಠಿ ಭಾಷೆಗಳ ಕವಿಗಳು ಭಾಗವಹಿಸಲಿದ್ದಾರೆ.

ADVERTISEMENT

ಸಂಗೀತ ವಿಭಾಗವು ಆಯೋಜಿಸಿರುವ ‘ದಾಸೋಹ ಸೂತ್ರ ಗಾಯನ ವ್ಯಾಖ್ಯಾನ’ ಕಾರ್ಯಕ್ರಮವನ್ನು ನಿರಂಜನ ನಿಷ್ಠಿ ಉದ್ಘಾಟಿಸುವರು. ಕುಲಸಚಿವ ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಲಿಂಗರಾಜ ಶಾಸ್ತ್ರಿ ಭಾಗವಹಿಸುವರು.

ಕರ್ನಾಟಕ ಸಂಗೀತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಹಾಗೂ ಹಿಂದೂಸ್ತಾನಿ ಗಾಯಕ ಡಾ.ಹನುಮಣ್ಣ ನಾಯಕ ದೊರೆ ಅವರು ಬೆಳಗನೆ ಬೆಳಗುವೆ ಮತ್ತು ಕೊಡುವದನ್ನೇ ಕಲಿಯಿರಿ ಎಂಬ ಎರಡು ಮಹಾದಾಸೋಹ ಸೂತ್ರಗಳನ್ನು ನಿರೂಪಿಸಲಿದ್ದಾರೆ. ಈ ಎರಡು ಸೂತ್ರಗಳ ನಿಖರ ಅರ್ಥಗಳನ್ನು ಪ್ರೊ.ಶಿವರಾಜ ಶಾಸ್ತ್ರಿ ಹೇರೂರ ವಿವರಿಸುತ್ತಾರೆ. ಪ್ರೊ.ರೇವಯ್ಯ ವಸ್ತ್ರದಮಠ ಅವರು ಗುರು ಲಿಂಗ ಜಂಗಮಕ್ಕೆ ಮತ್ತು ಗುರುವಿಗೆ ಶರಣು ಶರಣಾರ್ಥಿ ಎಂಬ ಎರಡು ಸೂತ್ರಗಳ ಗಾಯನ ಮಾಡಲಿದ್ದು, ಅದರ ಅರ್ಥವನ್ನು ಡಾ.ಲಿಂಗರಾಜ ಶಾಸ್ತ್ರಿ ವಿವರಿಸಲಿದ್ದಾರೆ.

ಮತ್ತೊಬ್ಬ ಹಿಂದೂಸ್ತಾನಿ ಗಾಯಕಿ ಡಾ.ಕಲಾವತಿ ದೊರೆ ಅವರು ಹೇಳುವ ‘ಗುರುಲಿಂಗ ಜಂಗಮವೇ ಪತಿಯಾಗಿ’ ಮತ್ತು ‘ದಾಸೋಹಕ್ಕಾಗಿ ಮಾಡುವ ಕೆಲಸವೇ’ ಎಂಬ ಎರಡು ಸೂತ್ರಗಳ ಸಾರಾಂಶವನ್ನು ಡಾ. ನೀಲಾಂಬಿಕಾ ಶೇರಿಕಾರ ಅರ್ಥದೊಂದಿಗೆ ವ್ಯಾಖ್ಯಾನಿಸಲಿದ್ದಾರೆ. ಗಾಯಕಿ ಕವಿತಾ ಮಠಪತಿ ‘ತಾಯಿ ದೇವರು’ ಮತ್ತು ‘ಶಿವಪಥ’ ಎಂಬ ಎರಡು ಸೂತ್ರಗಳನ್ನು ಮಂಡಿಸಲಿದ್ದಾರೆ. ಈ ಸೂತ್ರಗಳ ಅರ್ಥಗಳನ್ನು ಡಾ.ವಿಶ್ವನಾಥ ಮಠ ವಿವರಿಸುವರು.

ಡಾ.ಅಪ್ಪ ಅವರು ಬರೆದ ಮಹಾದಾಸೋಹ ಸೂತ್ರಗಳ ರಾಷ್ಟ್ರೀಯ ವಿಚಾರ ಸಂಕಿರಣ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಈ ವಿಚಾರ ಸಂಕಿರಣವನ್ನು ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಎಂ.ಮಹೇಶ್ವರಯ್ಯ ಉದ್ಘಾಟಿಸುವರು. ಈ ಸಂದರ್ಭದಲ್ಲಿ ಉತ್ತರ ಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ತಜ್ಞರು, ಭಾಷಣಕಾರರು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ವಿಶ್ವವಿದ್ಯಾಲಯದ ಅಡಿಯಲ್ಲಿ ಜರಗುವ ಯುವ ಜನೋತ್ಸವದಲ್ಲಿ ಸಂಗೀತ, ನೃತ್ಯ, ಕ್ವಿಜ್, ನಾಟಕ, ಚರ್ಚೆ, ಫೋಟೊಗ್ರಫಿ, ಸ್ಕಿಟ್, ಮೈಮ್, ಸ್ಥಳದಲ್ಲೇ ಚಿತ್ರ ಬಿಡಿಸುವುದು, ಕಾಲೇಜು ಪೋಸ್ಟರ್ ಮೇಕಿಂಗ್, ರಂಗೋಲಿ, ಮೆಹಂದಿ ಸೇರಿದಂತೆ ಒಟ್ಟು 28 ವಿವಿಧ ಸ್ಪರ್ಧೆಗಳು ನಡೆಯಲಿವೆ ಎಂದು ಶರಣಬಸವ ವಿ.ವಿ. ಕುಲಸಚಿವ ಅನೀಲಕುಮಾರ ಬಿಡವೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.